ಸುದ್ದಿ

ಬೆಂಗಳೂರಿನಲ್ಲಿ ಡೆಂಗ್ಯು ಕೇಸ್ 4 ಸಾವಿರಕ್ಕೆ ಏರಿಕೆ: 5 ಪ್ರಮುಖ ಆಸ್ಪತ್ರೆಗಳಿಗೆ ಹಾಸಿಗೆ ಮೀಸಲಿಡಲು ಸೂಚನೆ

Share It

ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಡೆಂಗ್ಯೂ ಸೋಂಕು ಹೆಚ್ಚಳವಾಗಿ ಆಸ್ಪತ್ರೆಗೆ ಸೇರುವವರ ಸಂಖ್ಯೆ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ನಗರದ 5 ಪ್ರಮುಖ ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಡಲು ಆದೇಶಿಸಿದೆ.

ನಗರದ ಕೆ.ಸಿ.ಜನರಲ್‌ ಆಸ್ಪತ್ರೆ, ಸಿ.ವಿ. ರಾಮನ್‌ ಆಸ್ಪತ್ರೆ ಮತ್ತು ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ತಲಾ 25 ಹಾಸಿಗೆಗಳನ್ನು ಮೀಸಲಿಡಬೇಕು. ಜೊತೆಗೆ ಯಲಹಂಕ ಮತ್ತು ಕೆ.ಆರ್‌.ಪುರ ತಾಲೂಕು ಆಸ್ಪತೆಗಳಲ್ಲಿ ತಲಾ 10 ಹಾಸಿಗೆಗಳನ್ನು ಡೆಂಗ್ಯೂ ರೋಗಿಗಳಿಗೆ ಮೀಸಲಿಡಲು ಆರೋಗ್ಯ ಇಲಾಖೆ ಆದೇಶಿಸಿದೆ.

ಡೆಂಗ್ಯು ರೋಗಿಗಳಿಗೆ ನಿಗದಿತ ಸಮಯದಲ್ಲಿ ಆರೈಕೆ ಮತ್ತು ಚಿಕಿತ್ಸೆ ನೀಡುವ ಮೂಲಕ ಸಾವು ತಡೆಗಟ್ಟಬಹುದಾಗಿದೆ. ಹಾಗಾಗಿ, ಪರಿಣಾಮಕಾರಿ ನಿರ್ವಹಣೆ ಮತ್ತು ತೀವ್ರತರವಾದ ಪ್ರಕರಣಗಳಿಗೆ ನಿರ್ಣಾಯಕ ಚಿಕಿತ್ಸೆ ಒದಗಿಸಲು ಮುಂದಿನ ಆದೇಶದವರೆಗೂ ಹಾಸಿಗೆಗಳನ್ನು ಮೀಸಲಿಡುವಂತೆ ಸೂಚಿಸಲಾಗಿದೆ.

ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ತಲಾ 10 ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 5 ಹಾಸಿಗೆಗಳನ್ನು ಮೀಸಲಿಡುವಂತೆ ಸೂಚಿಸಲಾಗಿದ್ದು, ಮುಂದಿನ ಆದೇಶದವರೆಗೂ ಮುಂದುವರೆಸಿಕೊಂಡು ಹೋಗಬೇಕು ಎಂದು ನಿರ್ದೇಶನ ನೀಡಲಾಗಿದೆ.

ಈ ನಡುವೆ, ಬೆಂಗಳೂರಿನಲ್ಲಿ ಬುಧವಾರ 270 ಹೊಸ ಪ್ರಕರಣಗಳು ವರದಿಯಾಗಿದ್ದು, 60 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. 171 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 4,040ಕ್ಕೆ ಏರಿಕೆಯಾಗಿದೆ.

ಡೆಂಗ್ಯೂ ಪರೀಕ್ಷೆ ದರ ಪ್ರದರ್ಶನಕ್ಕೆ ಲ್ಯಾಬ್‌ಗಳಿಗೆ ಸೂಚನೆ: ಡೆಂಗ್ಯೂ ಜ್ವರ ಪತ್ತೆ ಹಚ್ಚುವ ಟೆಸ್ಟ್‌ಗಳ ದರವನ್ನು ನಿಗದಿ ಪಡಿಸಿ, ಖಾಸಗಿ ಆಸ್ಪತ್ರೆಗಳು ಹಾಗೂ ಖಾಸಗಿ ಪ್ರಯೋಗಾಲಯಗಳು, ಡಯಾಗ್ನೋಸ್ಟಿಕ್‌ ಲ್ಯಾಬರೋಟರಿಗಳು ಸಾರ್ವಜನಿಕರಿಗೆ ಕಾಣುವಂತೆ ಪ್ರಚುರಪಡಿಸಬೇಕು ಎಂದು ಸೂಚನೆ ನೀಡಲಾಗಿದೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿವಿಧ ಟೆಸ್ಟ್‌ಗಳಿಗೆ ದರಗಳನ್ನು ನಿಗದಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಇದರ ಅನ್ವಯ ಹಣ ಪಡೆಯಬೇಕು. ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡಿದ ಬಗ್ಗೆ ದೂರು ಬಂದರೆ, ಪರಿಶೀಲಿಸಲಾಗುತ್ತದೆ. ಖಚಿತವಾದರೆ ಅಂತಹ ಆಸ್ಪತ್ರೆಯ ಲೈಸೆನ್ಸ್‌ ರದ್ದು ಮಾಡಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಡೆಂಗ್ಯು ಜ್ವರ ಪತ್ತೆ ಹಚ್ಚುವ ದರಗಳನ್ನು ಪರಿಷ್ಕರಿಸಿ, ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ಖಾಸಗಿ ಟೆಸ್ಟಿಂಗ್‌ ಲ್ಯಾಬ್ ಗಳಿಗೆ ಡೆಂಗ್ಯು ಜ್ವರ ಪತ್ತೆ ಹಚ್ಚುವ ಡೆಂಗೆ ಎಲಿಸಾಎನ್‌ಎಸ್‌ 1ಗೆ 300 ರೂ. ಮತ್ತು ಡೆಂಗ್ಯು ಎಲಿಸಾ ಐಜಿಎಂಗೆ 300 ರೂ. ರ್ಯಾಪಿಡ್‌ ಕಾರ್ಡ್‌ ಟೆಸ್ಟ್‌ ( ಎನ್‌ಎಸ್‌1, ಐಎಂಜಿ ಹಾಗೂ ಐಜಿಜಿ )ಗೆ 250 ರೂ. ದರಗಳನ್ನು ಸರ್ಕಾರ ದಿಂದ ನಿಗದಿ ಮಾಡಲಾಗಿದೆ. ಸರ್ಕಾರದ ಈ ಆದೇಶ ಉಲ್ಲಂಘನೆ ಆಗದಂತೆ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ತಪ್ಪಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಸ್ಪತ್ರೆಗಳ ಪ್ರಯೋಗಾಲಯಗಳಿಗೆ ನಿರಂತರ ಭೇಟಿ ನೀಡಿ, ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಗಳಲ್ಲಿ ಸೂಚನೆ ನೀಡಿದ್ದಾರೆ.


Share It

You cannot copy content of this page