ಬೆಂಗಳೂರು: ರಾಜ್ಯದಲ್ಲಿ ಅನಗತ್ಯ ಸಿಸೇರಿಯನ್ ಹೆರಿಗೆ ಪ್ರಮಾಣ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಪ್ರಸ್ತುತ ಶೇ.46 ರಷ್ಟು ಹೆರಿಗೆಗಳು ಸರ್ಜರಿ ಮೂಲಕ ನಡೆಯುತ್ತಿದೆ.
ಖಾಸಗಿ ಆಸ್ಪತ್ರೆಗಳು ಸಹಜ ಹೆರಿಗೆಯ ಪರಿಸ್ಥಿತಿಯಲ್ಲಿರುವ ಗರ್ಭಿಣಿಯರಿಗೂ ಕೂಡ ಸರ್ಜರಿಗೆ ಶಿಫಾರಸು ಮಾಡುತ್ತವೆ. ಇದರಿಂದಾಗಿಯೇ ಸಿಜೇರಿಯನ್ ಪ್ರಮಾಣ ಹೆಚ್ಚಾಗುತ್ತಿದೆ. ಇದು ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ಸಹಜ ಹೆರಿಗೆಗೆ ಉತ್ತೇಜನ ನೀಡಲು ಮುಂದಿನ ತಿಂಗಳು ವಿಶೇಷ ಕಾರ್ಯಕ್ರಮ ಘೋಷಿಸಲಾಗುವುದು ಎಂದು ಆರೋಗ್ಯ ಇಲಾಖೆ ಘೋಷಿಸಿದೆ.
ಸಹಜ ಹೆರಿಗೆಗಳನ್ನು ಹೆಚ್ಚಿಸಲು ರಾಜ್ಯದಲ್ಲಿ ಪ್ರತ್ಯೇಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು ತೆರೆಯಲಾಗಿದ್ದು, ತಾಲೂಕು ಮಟ್ಟದ ಆಸ್ಪತ್ರೆಗಳನ್ನು 24×7 ಪ್ರಸೂತಿ ಸೇವೆ ಲಭ್ಯಗೊಳ್ಳುವಂತೆ ಬಲಪಡಿಸಲಾಗುತ್ತಿದೆ.
ಶುಶ್ರೂಷಾಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.