ಬೆಂಗಳೂರು: ವಸತಿ ಪ್ರದೇಶದಲ್ಲಿ ಆಟೋ ಎಲ್ಪಿಜಿ ಘಟಕ ಸ್ಥಾಪನೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಕುಶಾಲನಗರದ ಮುಳ್ಳುಸೋಗೆಯ ನಿವಾಸಿ ಯು.ಎಂ.ಲಕ್ಷ್ಮಣ್ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಮತ್ತು ನ್ಯಾ.ಎಚ್.ರಾಚಯ್ಯ ಅವರಿದ್ದ ರಜಾಕಾಲದ ವಿಭಾಗೀಯ, ನೊಟೀಸ್ ನೀಡಿದೆ.
ಸ್ಥಳೀಯ ಜಿಲ್ಲಾಡಳಿತ ಹಾಗೂ ಎಲ್ಪಿಜಿ ಘಟಕ ಆರಂಭಿಸುತ್ತಿರುವ ತೆನ್ಪಾಂಡಿಯನ್ ಎಲ್ಪಿಜಿ ಇಂಪೋರ್ಟ್ ಟರ್ಮಿನಲ್ ಲಿಮಿಟೆಡ್ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ನೀಡಿ, ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎನ್.ಪಿ.ಅಮೃತೇಶ್, ”ನಿಯಮಗಳನ್ನು ಗಾಳಿಗೆ ತೂರಿ ಮುಳ್ಳು ಸೋಗೆ ಗ್ರಾಮದ ವಸತಿ ಬಡಾವಣೆಯಲ್ಲಿ ಆಟೋ ಎಲ್ಪಿಜಿ ವಿತರಣಾ ಘಟಕವನ್ನು ಆರಂಭಿಸಲಾಗುತ್ತಿದೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ಸಾಕಷ್ಟು ತೊಂದರೆ ಆಗಲಿದೆ” ಎಂದರು.
”ಅಲ್ಲದೇ, ವಲಯದ ನಿಯಮಗಳನ್ನು ಮೀರಿ ಘಟಕ ಸ್ಥಾಪಿಸಲಾಗುತ್ತಿದೆ. ಆ ಜಾಗಕ್ಕೆ ಹೊಂದಿಕೊAಡAತೆ ಚರ್ಚ್ ಇದೆ. ಹಾಗಾಗಿ, ಘಟಕ ಸ್ಥಾಪನೆಗೆ ನೀಡಿರುವ ಎನ್ಒಸಿ ಹಾಗೂ ಅನುಮತಿ ವಾಪಸ್ ಪಡೆದುಕೊಳ್ಳುವಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಬೇಕು” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.