ಶ್ರೀನಗರ(ಜಮ್ಮು& ಕಾಶ್ಮೀರ): ಶ್ರೀನಗರದ ನೌಗಾಮ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ಭಾರೀ ಸ್ಫೋಟ ಸಂಭವಿಸಿದ್ದು, 9 ಜನ ಮೃತಪಟ್ಟಿದ್ದಾರೆ.
ರಕ್ಷಣಾ ಪಡೆಗಳು ಭಯೋತ್ಪಾದಕರಿಂದ ವಶಪಡಿಸಿಕೊಂಡಿದ್ದ ಸ್ಫೋಟಕಗಳ ಪರಿಶೀಲನೆ ನಡೆಸುವ ವೇಳೆ ಸ್ಫೋಟದ ಅವಘಡ ನಡೆದಿದ್ದು, 9 ಜನ ಸಾವನ್ನಪ್ಪಿದ್ದು, 29 ಮಂದಿ ಗಾಯಗೊಂಡಿದ್ದಾರೆ.
ದೆಹಲಿಯ ಕೆಂಪುಕೋಟೆ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಫರಿದಾಬಾದ್ನಲ್ಲಿ ವಶಪಡಿಸಿಕೊಂಡಿದ್ದ ಬೃಹತ್ ಸ್ಫೋಟಕಗಳ ಸಂಗ್ರಹದ ಮಾದರಿಗಳನ್ನು ನೌಗಾಮ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಮತ್ತು ವಿಧಿವಿಜ್ಞಾನ ಅಧಿಕಾರಿಗಳು ಪರಿಶೀಲಿಸುವಾಗ ಘಟನೆ ನಡೆದಿದೆ.
ಇದು ಆಕಸ್ಮಿಕ ಘಟನೆ. ಮೃತ ಮತ್ತು ಗಾಯಗೊಂಡವರಲ್ಲಿ ಪೊಲೀಸರು ಮತ್ತು ವಿಧಿ ವಿಜ್ಞಾನ ಇಲಾಖೆಯ ಸಿಬ್ಬಂದಿ ಹೆಚ್ಚಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
