ಹೊಸದಿಲ್ಲಿ: ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಖುಲಾಸೆಗೊಂಡ ಆರೋಪಿಗಳು ರಾಹುಲ್ ಗಾಂಧಿ ವಿರುದ್ಧ1.5 ಕೋಟಿ ರು. ಗಳ ಮಾನನಷ್ಟ ಮೊಕದ್ದಮೆ ನೊಟೀಸ್ ನೀಡಿದ್ದಾರೆ.
2020 ರಲ್ಲಿ ಹತ್ರಾಸ್ ನಲ್ಲಿ ನಡೆದಿದ್ದ ದಲಿತ ಬಾಲಕಿಯೊಬ್ಬಳ ಮೇಲಿನ ಅತ್ಯಾಚಾರ ಮತ್ತು ಕೊಲೆಯ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಆರೋಪಿಗಳು ಆರಾಮವಾಗಿದ್ದಾರೆ, ಸಂತ್ರಸ್ತೆಯ ಕುಟುಂಬ ಸಂಕಷ್ಟದಲ್ಲಿದೆ ಎಂಬುದು ಇದರ ಸಾರಾಂಶವಾಗಿತ್ತು.
ಇದೀಗ ಪ್ರಕರಣದಲ್ಲಿ ಮೂವರು ಆರೋಪಿಗಳು ಖುಲಾಸೆಗೊಂಡಿದ್ದು, ಆ ಮೂವರ ವಕೀಲರು ರಾಹುಲ್ ಗಾಂಧಿಗೆ 1.5 ಕೋಟಿ ರು. ಗಳ ಮಾನನಷ್ಟ ಮೊಕದ್ದಮೆ ನೊಟೀಸ್ ಕಳುಹಿಸಿದ್ದಾರೆ. ಪ್ರಕರಣದಿಂದ ಖಲಾಸೆಗೊಂಡ ನಂತರ ತಮ್ಮ ಕಕ್ಷಿದಾರನಿಗೆ ರಾಹುಲ್ ಗಾಂಧಿ ಮತ್ತು ಇತರೆ ನಾಯಕರ ಆರೋಪ ಕಿರುಕುಳ ನೀಡುವಂತಹದ್ದಾಗಿದೆ ಎಂದು ವಕೀಲರು ದೂರಿದ್ದಾರೆ.
ಖುಲಾಸೆಗೊಂಡ ಆರೋಪಿಗಳ ಪರ ಹಿರಿಯ ವಕೀಲ ಮುನ್ನಾ ಸಿಂಗ್ ಪುಂಡೀರ್, ಕಾಂಗ್ರೆಸ್ ನಾಯಕರ ಆರೋಪಗಳು ಅಪರಾಧ ಸಾಭೀತಾಗದ ವ್ಯಕ್ತಿಗಳ ತೇಜೋವಧೆ ಮಾಡುವಂತಹದ್ದಾಗಿದೆ. ಹೀಗಾಗಿ, ಮಾನನಷ್ಟ ನೊಟೀಸ್ ನೀಡಲಾಗಿದೆ ಎಂದಿದ್ದಾರೆ. ರಾಹುಲ್ ಗಾಂಧಿ ಅವರು ನೊಟೀಸ್ ಗೆ ಉತ್ತರಿಸಲು15 ದಿನಗಳ ಕಾಲಾವಕಾಶ ನೀಡಲಾಗಿದೆ.
ಹತ್ರಾಸ್ ನಲ್ಲಾದ ದಲಿತ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆಯ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಸ್ವತಃ ಪೊಲೀಸರು ಮುಂದೆ ನಿಂತು ಶವಸಂಸ್ಕಾರ ನಡೆಸಿ, ಸಾಕ್ಷ್ಯನಾಶ ಮಾಡಿದ್ದಾರೆ ಎಂದು ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷದ ನಾಯಕರು ಆರೋಪಿಸಿದ್ದರು. ಇದೀಗ ಪ್ರಕರಣದಲ್ಲಿ ಆರೋಪಿಗಳಾಗಿದ್ದವರಲ್ಲಿ ಮೂವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.