ಕೇಂದ್ರದಿಂದ ರಾಜ್ಯ ಸರಕಾರದ ಮೇಲೆ ಮತ್ತೊಂದು ಅಸ್ತ್ರ:ಪಿಎಸ್ಐ ಶಂಕಾಸ್ಪದ ಸಾವಿನ ವರದಿ ಕೇಳಿದ ಗೃಹ ಸಚಿವಾಲಯ
ಯಾದಗಿರಿ ಪಿಎಸ್ಐ ಪರಶುರಾಮ ಅವರ ಅನುಮಾನಾಸ್ಪದ ಸಾವು ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಗೃಹ ಸಚಿವಾಲಯಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರ ಬರೆದಿದ್ದ ಬೆನ್ನೆಲ್ಲೇ ಇದೀಗ ಈ ಕೇಸ್ ಬಗ್ಗೆ ವರದಿ ನೀಡುವಂತೆ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಸರ್ಕಾರ ತಿಳಿಸಿದೆ.
ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಪ್ರಕರಣದ ಬಗ್ಗೆ ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.
ಯಾದಗಿರಿ ಪಿಎಸ್ಐ ಪರಶುರಾಮ ಅನುಮಾನಾಸ್ಪದ ಸಾವು ನಿಷ್ಪಕ್ಷಪಾತ ತನಿಖೆ ಆಗುತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಇತ್ತೀಚೆಗೆ ಆರೋಪಿಸಿದ್ದರು. ಜೊತೆಗೆ ಪತ್ರ ಕೂಡ ಬರೆದಿದ್ದರು. ಸದ್ಯ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರಕ್ಕೆ ಸ್ಪಂದಿಸಿರುವ ಕೇಂದ್ರ ಗೃಹ ಸಚಿವಾಲಯ ಪ್ರಕರಣದ ಮಾಹಿತಿ ನೀಡುವಂತೆ ಸೂಚಿಸಿದೆ.
ಯಾದಗಿರಿ ಪಿಎಸ್ಐ ಪರಶುರಾಮ ಸಾವಿನ ತನಿಖೆಯ ಹೊಣೆಯನ್ನ ಹೊತ್ತಿರುವ ಸಿಐಡಿ ಅಧಿಕಾರಿಗಳು ತನಿಖೆಯನ್ನ ಚುರುಕುಗೊಳಿಸಿದ್ದಾರೆ. ತನಿಖೆ ಜವಾಬ್ದಾರಿಯನ್ನ ತೆಗೆದುಕೊಂಡ ಸಿಐಡಿ ಎಸ್ಪಿ 6 ದಿನಗಳಲ್ಲಿ ಎಂಟ್ರಿ ಕೊಟ್ಟಿದ್ದರು. ಪರಶುರಾಮ ಕುಟುಂಬಸ್ಥರನ್ನ ಕರೆಸಿಕೊಂಡಿರುವ ಅಧಿಕಾರಿಗಳು ಪರಶುರಾಮ ಮೊಬೈಲ್ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕುಟುಂಬಸ್ಥರ ಸಮ್ಮುಖದಲ್ಲಿ ಸ್ಥಳ ಮಹಜರು ಕೂಡ ನಡೆಸಿದ್ದರು.
ಯಾದಗಿರಿ ನಗರ ಠಾಣೆಯಿಂದ ಸೈಬರ್ ಠಾಣೆಗೆ ವರ್ಗಾವಣೆ ಆಗಿದ್ದ ಪಿಎಸ್ಐ ಪರಶುರಾಮ ಸಾವಾಗಿ ಹಲವು ದಿನಗಳು ಕಳೆದಿವೆ. ಸಾವಾಗಿ ಮಾರನೇ ದಿನವೇ ಕೇಸ್ನ್ನ ರಾಜ್ಯಸರ್ಕಾರ ಸಿಐಡಿಗೆ ವಹಿಸಿತ್ತು. ಕೇಸ್ನ್ನ ತನಿಖೆಯ ಜವಾಬ್ದಾರಿ ವಹಿಸಿಕೊಂಡ ಮಾರನೇ ಸಿಐಡಿ ಅಧಿಕಾರಿಗಳು ಯಾದಗಿರಿಗೆ ಎಂಟ್ರಿ ಕೊಟ್ಟಿದ್ದರು. ಆರಂಭದಲ್ಲಿ ಸಿಐಡಿ ಡಿವೈಎಸ್ಪಿ ಪುನೀತ್ ನೇತೃತ್ವದ ತಂಡ ಆಗಮಿಸಿದ ಯಾದಗಿರಿ ಡಿವೈಎಸ್ಪಿ ಕಚೇರಿಯಲ್ಲಿ ಸಾಕಷ್ಟು ಮಾಹಿತಿಯನ್ನ ಕಲೆ ಹಾಕಿದ್ದರು.


