ಬೆಂಗಳೂರು: ನಗರದಲ್ಲಿ ಕುಡಿಯುವ ನೀರಿನ ಕೊರತೆ ತಪ್ಪಿಸಲು ಬೆಂಗಳೂರು ಜಲಮಂಡಳಿ ಇತ್ತೀಚೆಗೆ ಹೊಸ ಆದೇಶ ಹೊರಡಿಸಿತ್ತು. ಆ ಮೂಲಕ ಕುಡಿಯುವ ನೀರನ್ನು ವ್ಯರ್ಥಮಾಡಿದ್ದಲ್ಲಿ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿತ್ತು. ಆದರೂ ಬೆಂಗಳೂರಿನಲ್ಲಿ ಸಾಕಷ್ಡು ಮಂದಿ ಕುಡಿವ ನೀರು ವ್ಯರ್ಥಮಾಡಿದ ಹಿನ್ನಲೆ ದಂಡಾಸ್ತ್ರ ಪ್ರಯೋಗ ಮಾಡಲಾಗಿದೆ. ಈ ಮೂಲಕ ಬೇಸಿಗೆ ಆರಂಭದಲ್ಲೇ ಬೆಂಗಳೂರು ಜನತೆಗೆ ಜಲಮಂಡಳಿ ಶಾಕ್ ನೀಡಿದೆ.
ಕುಡಿಯುವ ನೀರು ವ್ಯರ್ಥ ಮಾಡಿದವರಿಗೆ ಜಲಮಂಡಳಿ 112 ಕೇಸ್ ದಾಖಲಾಗಿದ್ದು, 5.60 ಲಕ್ಷ ರೂ ದಂಡ ವಸೂಲಿ ಮಾಡಲಾಗಿದೆ. ಕಾವೇರಿ ಕುಡಿಯುವ ನೀರು ವ್ಯರ್ಥ ಮಾಡದಂತೆ ಜಲಮಂಡಳಿ ಇತ್ತೀಚೆಗೆ ಸುತ್ತೋಲೆ ಹೊರಡಿಸಿತ್ತು. ಈ ಮೂಲಕ ಇದೀಗ ಆದೇಶ ಉಲ್ಲಂಘಿಸಿದವರಿಂದ ತಲಾ 5 ಸಾವಿರ ರೂ. ದಂಡ ವಸೂಲಿ ಮಾಡಲಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34ರ ಅನುಸಾರ ನಗರದಲ್ಲಿ ಕುಡಿಯುವ ನೀರನ್ನು ವಾಹನ ಸ್ವಚ್ಚತೆಗೆ, ಕೈತೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ, ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿ ಕುಡಿಯುವ ಹೊರತು ಇನ್ನಿತರೆ ಬಳಕೆಗೆ, ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗೆ ಕಾವೇರಿ ನೀರಿನ ಬಳಕೆ ನಿಷೇಧಿಸಲಾಗಿತ್ತು.
ಕಳೆದ 7 ದಿನಗಳಲ್ಲಿ ಜಲಮಂಡಳಿ ಸಿಬ್ಬಂದಿ ಕಾವೇರಿ ನೀರನ್ನು ಪೋಲು ಮಾಡಿದವರ ವಿರುದ್ದ ದೂರು ದಾಖಲಿಲಾಗಿದೆ. ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲು ಮುಂದಾಗಿದ್ದೇವೆ ಎಂದು ಜಲಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.