ಹಾವೇರಿ: ಬಾಲಕನ ಕೆನ್ನೆಯಲ್ಲಾಗಿದ್ದ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿದ್ದ ನರ್ಸ್ ಒಬ್ಬರನ್ನು ಆರೋಗ್ಯ ಇಲಾಖೆ ಅಮಾನತು ಮಾಡಿ ಆದೇಶಿಸಿದೆ.
ಆರಂಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನರ್ಸ್ಗೆ ನೊಟೀಸ್ ನೀಡಿ, ಬೇರೆಡೆಗೆ ವರ್ಗಾವಣೆ ಮಾಡಿದ್ದರು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಅವರನ್ನು ಅಮಾನತು ಮಾಡಿ ಆದೇಶ ಮಾಡಿದ್ದಾರೆ.
ಜ.೧೪ ರಂದು ಗಾಯಗೊಂಡಿದ್ದ ಮಗುವನ್ನು ಅಡೂರು ಆಸ್ಪತ್ರೆಗೆ ಕರೆತಂದಿದ್ದರು. ಆಳವಾಗಿ ಗಾಯವಾಗಿದ್ದರೂ, ನರ್ಸ್ ಜ್ಯೋತಿ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿ ಕಳುಹಿಸಿದ್ದರು. ಈ ಸಂಬAಧ ಪೋಷಕರು ಸ್ಥಳೀಯ ಆರೋಗ್ಯ ಸಮಿತಿಗೆ ದೂರು ನೀಡಿದ್ದರು.
ಆದರೆ, ಸಮಿತಿ ಏನೂ ಕ್ರಮ ತೆಗೆದುಕೊಳ್ಳದೇ ಇದ್ದಾಗ, ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರು. ಡಿಎಚ್ಓ ಕೂಡ ಅವರಿಗೆ ನೊಟೀಸ್ ನೀಡಿ ಬೇರೆಡೆ ವರ್ಗಾವಣೆ ಮಾಡಿ ಕೈತೊಳೆದುಕೊಂಡಿದ್ದರು. ಅನಂತರ ಜಾಲತಾಣದಲ್ಲಿ ಘಟನೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡು ಅಮಾನತು ಮಾಡಿದ್ದಾರೆ.
ಈ ಘಟನೆ ಆರೋಗ್ಯ ಇಲಾಖೆಯ ನಿರ್ಲಕ್ಷö್ಯ, ವೈದ್ಯಕೀಯ ಸಿಬ್ಬಂದಿಯ ಅನನುಭವವನ್ನು ತೋರಿಸುತ್ತದೆ ಎಂಬುದಾಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ದೇಶಾದ್ಯಂತ ಭಾರಿ ಸುದ್ದಿ ಮಾಡಿತ್ತು. ಆರೋಗ್ಯ ವ್ಯವಸ್ಥೆಯನ್ನೇ ಅಣಕಿಸುವ ಸ್ಥೀತಿ ನಿರ್ಮಾಣವಾದಾಗ ಎಚ್ಚೆತ್ತುಕೊಂಡು ಅಧಿಕಾರಿಗಳು ಅಮಾನತು ಮಾಡಿದ್ದಾರೆ.

