ATMಗಳಲ್ಲಿ ವಂಚನೆ ಮಾಡಿ ಗೆಳತಿಯ ಗಂಡನ ಹೃದಯ ಶಸ್ತ್ರಚಿಕಿತ್ಸೆ: ಮೈಸೂರು ವ್ಯಕ್ತಿಯ ಕಳ್ಳತನದ ಕಹಾನಿ
ಪುಣೆ: ಪುಣೆ ಮತ್ತು ಚಿಂಚ್ವಾಡ್ನಲ್ಲಿರುವ ಎಟಿಎಂಗಳಲ್ಲಿ ಹಿರಿಯ ನಾಗರಿಕರಿಗೆ ಸಹಾಯ ಮಾಡುವ ನೆಪದಲ್ಲಿ ಹಲವಾರು ಕಾರ್ಡ್ ಸ್ವಾಪ್ ವಂಚನೆ ನಡೆಸಿದ್ದ ಮೈಸೂರು ಮೂಲದ ರಾಜೀವ್ ಪ್ರಹ್ಲಾದ್ ಕುಲಕರ್ಣಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧನದ ನಂತರ ಕುಲಕರ್ಣಿಯ ಪ್ರೇಮ್ ಕಹಾನಿ ಬಯಲಾಗಿದ್ದು, ವಂಚನೆ ಹಣದಲ್ಲಿ ತನ್ನ ಗೆಳತಿಗೆ ಕಾರು ಮತ್ತು ಸ್ಕೂಟರ್ ಕೊಡಿಸಿದ್ದಲ್ಲದೆ, ಆತನ ಗಂಡನ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿದ್ದ ಎಂದು ತಿಳಿದುಬಂದಿದೆ. ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, 166 ಎಟಿಎಂ ಕಾರ್ಡ್ಗಳನ್ನು ವಶಕ್ಕೆ ಪಡೆದಿದ್ದಾರೆ.
ವಿಶ್ರಮ್ ಬಾಗ್, ಸಹಕಾರ ನಗರ, ಬಿಬ್ವೆವಾಡಿ, ಸೀಮಹಘಡ್ ರಸ್ತೆ, ಕೊಥ್ರುಡ್, ವಿಶ್ರಾಂತವಾಡಿ, ಆಳಂದಿ, ಭೋಸಾರಿ, ಕಂಟೋನ್ಮೆAಟ್, ಭಾರತೀ ವಿದ್ಯಾಫೀಠ ಮತ್ತು ಶಿವಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯ 16 ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದು, ಒಟ್ಟು 17.9 ಲಕ್ಷ ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈತನ ಬಳಿ ಸಿಕ್ಕಿರುವ ಕಾರ್ಡ್ಗಳ ಸಂಖ್ಯೆ ನೋಡಿದರೆ ಈತ 100 ಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರಬಹುದು. ಮುಂದೆ ವಂಚನೆಗೊಳಗಾದ ಮತ್ತಷ್ಟು ಜನರು ದೂರು ನೀಡಲು ಮುಂದೆ ಬರಬಹುದು ಎಂದು ಉಪ ಪೊಲೀಸ್ ಆಯುಕ್ತ ಸಂದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ.
ಆರೋಪಿ ಫೆ.2 ರಂದು ಲಾಲ್ ಬಹದ್ದೂರ್ ರಸ್ತೆಯ ಎಟಿಎಂವೊAದರಲ್ಲಿ ವೃದ್ಧೆಯೊಬ್ಬರಿಗೆ ಸಹಾಯ ಮಾಡುವ ನೆಪದಲ್ಲಿ 22 ಸಾವಿರ ರು. ವಂಚನೆ ಮಾಡಿದ್ದ. ಆ ಮಹಿಳೆ ನೀಡಿದ ದೂರಿನ ಮೇರೆಗೆ 52 ವರ್ಷದ ಕುಲಕರ್ಣಿಯನ್ನು ಫೆ.5 ರಂದು ಪೊಲೀಸರು ಬಂಧಿಸಿದ್ದರು.
ವಂಚನೆ ಮಾಡುತ್ತಿದ್ದದು ಹೇಗೆ?: ಎಟಿಎಂಗಳ ಮುಂದೆ ಕಾಯುತ್ತಿದ್ದ ಕುಲಕರ್ಣಿ, ವಯೋವೃದ್ಧರಿಗೆ ಸಹಾಯ ಮಾಡುವ ನೆಪದಲ್ಲಿ ಪಿನ್ ತಿಳಿದುಕೊಂಡು, ನಂತರ ಕಾರ್ಡ್ ಬದಲಾಯಿಸುತ್ತಿದ್ದ. ನಂತರ ಅಲ್ಲಿಂದ ಪರಾರಿಯಾಗಿ, ಬೇರೆಡೆ ಅದನ್ನು ಬಳಸಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗೆಳತಿ-ಗಂಡನ ಜತೆಗೆ ಮೈಸೂರಿನಲ್ಲಿ ವಾಸ : ಕುಲಕರ್ಣಿ ಕಳ್ಳತನಕ್ಕಷ್ಟೇ ಪುಣೆ ಆಯ್ಕೆ ಮಾಡಿಕೊಂಡಿದ್ದ. ಆದರೆ, ಆತ ಮದುವೆಯಾಗಿರಲಿಲ್ಲ. ತನ್ನ ಗೆಳತಿ ಮತ್ತು ಗಂಡನ ಜತೆಗೆ ಮೈಸೂರಿನಲ್ಲಿ ವಾಸ ಮಾಡುತ್ತಿದ್ದ. ಕಳ್ಳತನದಿಂದ ಬಂದ ಹಣದಿಂದ ಮಹಿಳೆಗೆ ಕಾರು, ಸ್ಕೂಟರ್ ಖರೀದಿಸಿ ಕೊಡುವ ಜತೆಗೆ, ಆಕೆಯ ಬೆನ್ನುಚಿಕಿತ್ಸೆಗೆ ಹಣ ನೀಡಿದ್ದ. ಜತೆಗೆ, ಆಕೆಯ ಗಂಡನ ಹೃದಯ ಶಸ್ತ್ರಚಿಕಿತ್ಸೆಯನ್ನು ಸಹ ಕುಲಕರ್ಣಿಯೇ ಮಾಡಿಸಿದ್ದ ಎಂದು ಹೇಳಲಾಗಿದೆ.


