ಅಪರಾಧ ಸುದ್ದಿ

ಕಂಡಕ್ಟರ್ ಮೇಲೆ ಹಲ್ಲೆ ಹಿನ್ನೆಲೆ: ಮಹಾರಾಷ್ಟ್ರದ ಬಸ್ಸುಗಳಿಗೆ ಬೆಳಗಾವಿ ಗಡಿಯಲ್ಲಿ ತಡೆ!

Share It

ಬೆಳಗಾವಿ: ಸಾರಿಗೆ ಬಸ್ ನಲ್ಲಿ ಕನ್ನಡ ಮಾತಾಡಿ ಅಂದಿದ್ದಕ್ಕೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವುದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣ ಖಂಡಿಸಿ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಸದ್ಯ ಬೆಳಗಾವಿ ಗಡಿಯಲ್ಲಿ ದ್ವೇಷಮಯ ವಾತಾವರಣ ಹಿನ್ನೆಲೆ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುವ ಸಾರಿಗೆ ಬಸ್ ಸಂಚಾರವನ್ನು ಮಹಾರಾಷ್ಟ್ರ ಸರ್ಕಾರ ಸ್ಥಗಿತಗೊಳಿಸಿದೆ.

ಮರಾಠಿ ಬರಲ್ಲ.. ಕನ್ನಡ ಮಾತಾಡಿ ಅಂದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಮರಾಠಿಗರ ಈ ಪುಂಡಾಟಕ್ಕೆ ಕಂಡಕ್ಟರ್ ಕಣ್ಣೀರು ಹಾಕಿದ್ದರು. ಸದ್ಯ ನಾಲ್ವರನ್ನು ಬಂಧಿಸಲಾಗಿದೆ. ಈ ನಡುವೆ ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕೆ ಬರುವ ಸಾರಿಗೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಬೆಳಗಾವಿ ಗಡಿವರೆಗೂ ಮಾತ್ರ ಮಹಾರಾಷ್ಟ್ರ ಸಾರಿಗೆ ಬಸ್​ಗಳು ಬರುತ್ತಿವೆ. ಆದರೆ ಕರ್ನಾಟಕದಿಂದ ಎಂದಿನಂತೆ ಮಹಾರಾಷ್ಟ್ರದ ವಿವಿಧ ಕಡೆಗೆ ರಾಜ್ಯದ ಸಾರಿಗೆ ಬಸ್​​ಗಳು ಸಂಚಾರ ಮಾಡುತ್ತಿವೆ.

ಸರ್ಕಾರಿ ಬಸ್ ಕಂಡಕ್ಟರ್ ಮಹಾದೇವಪ್ಪ ಮತ್ತು ಚಾಲಕ ಕತ್ತಲ್ ಸಾಬ್ ನಿನ್ನೆ ಎಂದಿನಂತೆ ಬೆಳಗಾವಿ ಸಿಟಿಯಿಂದ ಪಂಥ ಬಾಳೇಕುಂದ್ರಿಗೆ ಹೊರಟ್ಟಿದ್ದರು. ಆಗ ಯುವತಿಯೊಬ್ಬಳು 2 ಫ್ರೀ ಟಿಕೆಟ್​ ತಗೊಂಡಿದ್ದಾಳೆ. ಇನ್ನೊಬ್ಬರು ಯಾರು ಅಂತಾ ನೋಡಿದರೆ ಯುವಕ. ಹಾಗೆಲ್ಲಾ ಹುಡುಗರು ಫ್ರೀ ಟಿಕೆಟ್​ ತಗೊಳ್ಳಂಗಿಲ್ಲ ಅಂತಾ ಹೇಳಿದ್ದಕ್ಕೆ, ಏನೇ ಹೇಳೋದಿದ್ರು ಮರಾಠಿಯಲ್ಲಿ ಹೇಳು ಅಂತಾ ಆಕೆ ದಬಾಯಿಸಿದ್ದಾಳಂತೆ.

ನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಹೇಳಿ ಅಂದಿದ್ದಕ್ಕೆ ಮರಾಠಿ ಕಲಿತ್ಕೋ ಅಂತಾ ಜಗಳ ಮಾಡಿದ್ದಾರೆ. ಬಳಿಕ ಆಕೆ ಜತೆ ಇದ್ದ ಯುವಕ ಕರೆ ಮಾಡಿ ಊರಿನ ಜನರಿಗೆ ವಿಷಯ ಮುಟ್ಟಿಸಿದ್ದಾನೆ. ಬಸ್ ಬಾಳೇಕುಂದ್ರಿಗೆ ಬರ್ತಿದ್ದಂತೆ ಕಂಡಕ್ಟರ್ ಮತ್ತು ಡ್ರೈವರ್ ಮೇಲೆ ಹತ್ತಿಪ್ಪತ್ತು ಮಂದಿ ಸೇರಿ ಹಲ್ಲೆ ಮಾಡಿದ್ದಾರೆ. ಸದ್ಯ ಮಾರಿಹಾಳ ಪೊಲೀಸರು ಮಾರುತಿ, ರಾಹುಲ್ ರಾಜು ನಾಯ್ಡು ಮತ್ತು ಬಾಳು ಸುರೇಶ್ ಗೊಂಜೇಕರ್​ ಅವರನ್ನ ಬಂಧಿಸಿ ಬೆಳಗಾವಿಯ ಹಿಂಡಲಗಾ ಜೈಲಿಗಟ್ಟಿದ್ದಾರೆ.


Share It

You cannot copy content of this page