ರಾಜಧಾನಿಯಲ್ಲಿ ಸರ ಅಪಹರಣ, ಮನೆಗಳ್ಳತನ ಮಾಡುತ್ತಿದ್ದ ಇರಾನಿ ಗ್ಯಾಂಗ್ ಬಂಧನ
ಬೆಂಗಳೂರು : ಬೆಂಗಳೂರು ನಾಗರಿಕರ ಪಾಲಿಗೆ ದುಸ್ವಪ್ನವಾಗಿದ್ದ ಆರು ಜನ ಖರರ್ನಾಕ್ ಕಳ್ಳರನ್ನು ಬಂಧಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಡಿಗೇಹಳ್ಳಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಆರು ಜನರನ್ನು ಬಂಧಿಸಿದ್ದು, ೨೮.೫ ಲಕ್ಷ ಮೌಲ್ಯದ 450 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಸಿರಾಜ್ ಆಲಿ, ಸಾಧಿಕ್ ರಫೀಕ್, ಅಬ್ಬಾಸ್ ಆಲಿ, ತಬ್ರೇಜ್ ಆಲಿ, ಅಜಿರಾಂ ಮತ್ತು ಮಾದುಷಾ ಎಂಬ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ಕೈಗೊಂಡಿದ್ದಾರೆ.
ಕೊಡಿಗೇಹಳ್ಳಿ ವ್ಯಾಪ್ತಿಯ ಕಳ್ಳತನ ಪ್ರಕರಣವೊಂದರಲ್ಲಿ ಇವರ ಬೆನ್ನುಹತ್ತಿದ್ದ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಮನೆ ಮಾಲೀಕರು ಬೀಗ ಹಾಕಿ ರಾಜಸ್ತಾನಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದರು. 30 ಗ್ರಾಂ ಚಿನ್ನಾಭರಣ ದೋಚಿದ್ದರು.
ಮತ್ತೊಂದು ಪ್ರಕರಣದಲ್ಲಿ ದೇವಸ್ಥಾನದಿಂದ ಮನೆಗೆ ಹೋಗುತ್ತಿದ್ದ ಮಹಿಳೆಯನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ, 30 ಗ್ರಾಂ ಚಿನ್ನದ ಸರ ಕಿತ್ತೊಯ್ದಿದ್ದರು. ಈ ಎರಡು ಪ್ರಕರಣದ ಜಾಡುಹಿಡಿದು ಹೊರಟ ಪೊಲೀಸರು, ಕೋಲಾರದ ಚಿಂತಾಮಣಿ ಸರ್ಕಲ್ನಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ್ದರು.
ಈ ಆರೋಪಿ ನೀಡಿದ ಮಾಹಿತಿ ಮೇರೆಗೆ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆರೋಪಿಗಳು ಕಳ್ಳತನ ಮಾಡಿದ 145 ಗ್ರಾಂ ಚಿನ್ನವನ್ನು ಆಂಧ್ರಪ್ರದೇಶದ ಅನ್ನಮೈಯ್ಯ ಜಿಲ್ಲೆಯ ಅಲ್ಕಿರಿ ಮಂಡಲದ ಅಂಗಡಿಯೊAದರಲ್ಲಿ ಮಾರಾಟ ಮಾಡಿದ್ದರು ಎನ್ನಲಾಗಿದೆ.
ಬೆಳ್ಳಾವಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಹಾಗೂ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿಗಳೆಲ್ಲರೂ ಸರಣಿ ಸರಪಹರಣ, ಮನೆಗಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ.


