ಹೊಸಪೇಟೆ : ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿ 4 ದಿನವಾಗಿದೆ. ಇದೀಗ ಹೊಸ ಗೇಟ್ ಅಳವಡಿಸಲು ಬೇಕಾದ ಎಲ್ಲಾ ಸಿದ್ದತೆ ಯುದ್ದೋಪಾದಿಯಲ್ಲಿ ನಡೆಯುತ್ತಿದೆ. ಸದ್ಯ ಈ ಬಗ್ಗೆ ಮಾತನಾಡಿರುವ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ಅವರು ನಾಳೆ ಶುಭ ಸುದ್ದಿ ಕೊಡುತ್ತೇನೆ ಎಂದು ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ನ ಟಿ.ಬಿ ಡ್ಯಾಂ ಬಳಿ ತಜ್ಞ ಕನ್ನಯ್ಯ ನಾಯ್ಡು ಈ ಬಗ್ಗೆ ಹೀಗೆ ಹೇಳಿದ್ದಾರೆ: ‘ಮೊದಲು ಕ್ರಸ್ಟ್ ಗೇಟ್ ಕೂರಿಸೋದು ದೊಡ್ಡ ಚಾಲೆಂಜ್ ಆಗಿದೆ. 19ನೇ ಕ್ರಸ್ಟ್ ಗೇಟ್ ಕೂರಿಸಿದ ನಂತರ ಅಷ್ಟೊಂದು ಕಷ್ಟ ಆಗಲ್ಲ. ನನ್ನ ಜೀವನದಲ್ಲಿ ಇದೊಂದು ದೊಡ್ಡ ಚಾಲೆಂಜ್. ಶ್ರೀಶೈಲ ಡ್ಯಾಂ ಸಮಸ್ಯೆಗೂ ಈ ಡ್ಯಾಂ ಸಮಸ್ಯೆಗೂ ವ್ಯತ್ಯಾಸ ಇದೆ.
ಗೇಟ್ ಕೂರಿಸುವ ವಿಡಿಯೋ ಮಾಡುವುದನ್ನ ಬೇಡ ಎಂದಿದ್ದೇನೆ. ಡ್ಯಾಂ ಸುತ್ತ 144 ಸೆಕ್ಸೆನ್ ಜಾರಿ ಮಾಡಲು ಮನವಿ ಮಾಡಿದ್ದೇನೆ. ಯಾವ ರಾಜಕಾರಣಿಗಳಿಗೂ ಎಂಟ್ರಿ ಕೊಡಬೇಡಿ ಎಂದಿದ್ದೇನೆ. ಇದೇ ಮೊದಲ ಬಾರಿಗೆ ಈ ರೀತಿ ಪ್ರಯತ್ನ ಮಾಡ್ತಿದ್ದೇವೆ. ಎಲ್ಲಾ ಒಳ್ಳೆಯದಾಗುತ್ತೆ, ನಾಳೆಯೊಳಗೆ ಗುಡ್ ನ್ಯೂಸ್ ಕೊಡ್ತೇನೆ. ಆಗ ಸೆಲೆಬ್ರೇಷನ್ ಮಾಡೋಣ ಎಂದು ತಿಳಿಸಿದರು.
ಒಟ್ಟು 5 ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಕೆಲಸ ಆರಂಭ ಆಗಿದೆ. ಒಂದು ಸ್ಟಾಪ್ ಲಾಗ್ ಗೇಟ್ 25 ಟಿಎಂಸಿ ನೀರನ್ನ ತಡೆಯುತ್ತದೆ. ಒಟ್ಟು 5 ಗೇಟ್ಗಳನ್ನ ಅಳವಡಿಕೆ ಮಾಡುತ್ತೇವೆ. ಅವಶ್ಯಕತೆ ಬಿದ್ದರೆ ಇನ್ನೂ 3 ಗೇಟ್ ಅಳವಡಿಕೆ ಮಾಡುತ್ತೇವೆ. ಒಟ್ಟು 90 ಟಿಎಂಸಿ ನೀರನ್ನು ಸಂಗ್ರಹಿಸಲು ಪ್ರಯತ್ನ ಮಾಡ್ತೇವೆ ಎಂದರು.
ತುಂಗಭದ್ರಾ ಜಲಾಶಯದ 19ನೇ ಗೇಟ್ ಕೂರಿಸುವ ಕಾರ್ಯ ಭರದಿಂದ ಸಾಗಿದೆ. ಆದರೆ ಗೇಟ್ ಲಾಗ್ನ ಪ್ಲೇಟ್ ಗಳನ್ನ ಟ್ರಕ್ ನಿಂದ ಕ್ರೇನ್ ಮೂಲಕ ಕೆಳಗಿಳಿಸುವಾಗ ಬ್ಯಾಲೆನ್ಸ್ ತಪ್ಪಿದ ಘಟನೆ ನಡೆದಿದೆ. ಜಲಾಶಯದ ಮೇಲ್ಭಾಗಕ್ಕೆ ತೆಗೆದುಕೊಂಡು ಹೋಗುವ ಮುನ್ನ ಘಟನೆ ನಡೆದಿದೆ. ತದನಂತರ ಕ್ರೇನ್ ನಿಂದ ಬೆಲ್ಟ್ ಹಾಕಿ ನಿಧಾನಕ್ಕೆ ಕಬ್ಬಿಣದ ಪ್ಲೇಟ್ ಗಳನ್ನ ಸಾಗಿಸಲಾಯಿತು.