ಅಪರಾಧ ಸುದ್ದಿ

ಬೆಂಗಳೂರು: ಕುಂಭಮೇಳ ಹೆಸರಿನಲ್ಲಿ ಅಮಾಯಕರಿಂದ ಭಾರೀ ಸುಲಿಗೆ ಮಾಡಿದ್ದವ ಅರೆಸ್ಟ್!

Share It

ಬೆಂಗಳೂರು: ಪ್ರಯಾಗ್ ರಾಜ್ ಮಹಾ ಕುಂಭಮೇಳ ಪ್ರವಾಸ ಹೆಸರಲ್ಲಿ 100ಕ್ಕೂ ಹೆಚ್ಚು ಜನರಿಂದ ಹಣ ಪಡೆದು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ಆರೋಪಿಯನ್ನು ನಗರದ ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ.

ರಾಘವೇಂದ್ರ ರಾವ್ ಬಂಧಿತ ಆರೋಪಿ. ಪಾಂಚಜನ್ಯ ಟೂರ್ಸ್ ಆ್ಯಂಡ್​ ಟ್ರಾವೆಲ್ಸ್​ನಿಂದ ಅಯೋಧ್ಯೆ, ಕಾಶಿ, ಪ್ರಯಾಗ್​ರಾಜ್, ವಾರಣಾಸಿ ಸೇರಿದಂತೆ ವಿವಿಧ ತೀರ್ಥ ಕ್ಷೇತ್ರಗಳಿಗೆ 14 ದಿನಗಳ ಪ್ರವಾಸಕ್ಕೆ ಕರೆದೊಯ್ಯುವಾಗಿ ಫೇಸ್​ಬುಕ್​ನಲ್ಲಿ ಜಾಹೀರಾತು ನೀಡಿದ್ದಾನೆ. ಇದನ್ನು ನಂಬಿದ ಯಾತ್ರಾರ್ಥಿಗಳು ರಾಘವೇಂದ್ರ ರಾವ್​ನನ್ನು ಸಂಪರ್ಕಿಸಿದ್ದಾರೆ. ಆಗ, ಆರೋಪಿ ರಾಘವೇಂದ್ರ ರಾವ್, 7 ದಿನಗಳ ಪ್ಯಾಕೇಜ್​ಗೆ ತಲಾ 49 ಸಾವಿರ ರೂ. ಪಡೆದಿದ್ದಾನೆ.​ ಹೀಗೆ, ಪ್ರವಾಸದ ಹೆಸರಲ್ಲಿ 100ಕ್ಕೂ ಹೆಚ್ಚು ಜನರಿಂದ 70 ಲಕ್ಷ ರೂ. ಪಡೆದಿದ್ದಾನೆ. ಬಳಿಕ, ರಾಘವೇಂದ್ರ ರಾವ್ 2 ರೀತಿಯ ವಂಚನೆ ಎಸಗಿದ್ದಾನೆ.

ಕೆಲವರಿಗೆ ಟಿಕೆಟ್ ಬುಕ್ ಮಾಡಿ, ನಂತರ ರದ್ದು ಮಾಡಿದ್ದಾನೆ. ರದ್ದು ಮಾಡಿದ ಬಳಿಕ ವಾಪಸ್​ ಆದ ಹಣವನ್ನು ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದಾನೆ.

ಇನ್ನು ಕೆಲವರಿಗೆ, ಪ್ರಯಾಗ್ ರಾಜ್​ಗೆ ಯಾತ್ರಿಕರು ತಲುಪಿದ ನಂತರ ಅವರ ರಿಟರ್ನ್ ಟಿಕೆಟ್ ರದ್ದು ಮಾಡಿದ್ದಾನೆ. ವಾಪಸ್​ ಆದ ಹಣವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ. ಟಿಕೆಟ್ ರದ್ದಾದ ಬಳಿಕ ರಾಘವೇಂದ್ರ ರಾವ್​ ಮೊಬೈಲ್ ಸ್ವಿಚ್​ ಆಫ್ ಮಾಡಿದ್ದಾನೆ. ಈ ಬಗ್ಗೆ ಗೋವಿಂದರಾಜನಗರ ಪೊಲೀಸ್​ ಠಾಣೆಯಲ್ಲಿ 20 ಕ್ಕೂ ಹೆಚ್ಚು ಜನರು ದೂರು‌ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ರಾಘವೇಂದ್ರ ರಾವ್​ನನ್ನು ಬಂಧಿಸಿದ್ದಾರೆ.

ವಂಚಿಸಿ ಪಡೆದಿದ್ದ ಹಣದಲ್ಲಿ ರಾಘವೇಂದ್ರ ರಾವ್ ಬೆಟ್ಟಿಂಗ್ ಆಡಿ ಸೋತಿದ್ದಾನೆ. ರಾಘವೇಂದ್ರ ರಾವ್​ ಬೆಟ್ಟಿಂಗ್ ಆ್ಯಪ್​ನಲ್ಲಿ ಹಣ ಹಾಕಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಆದಾಗ್ಯೂ ಗೋವಿಂದರಾಜನಗರ ಠಾಣೆ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.


Share It

You cannot copy content of this page