ನವದೆಹಲಿ: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ದಲಿತರ ಬಗ್ಗೆ ನಿರ್ಲಕ್ಷ್ಯ ಮತ್ತು ತಿರಸ್ಕಾರದ ಭಾವನೆ ಹೊಂದಿವೆ. ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ದಲಿತರು ಬಿಎಸ್ಪಿಗೆ ಮತ ಚಲಾಯಿಸುವಂತೆ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಕರೆ ನೀಡಿದ್ದಾರೆ.
ಮತ ಚಲಾಯಿಸುವಾಗ ಮತದಾರರು ಐತಿಹಾಸಿಕ ನಿರ್ಲಕ್ಷ್ಯದ ಬಗ್ಗೆ ಜಾಗರೂಕರಾಗಿರಬೇಕು. ವಿಧಾನಸಭಾ ಚುನಾವಣೆ ನಡೆಯಲಿರುವ ಸಮಯದಲ್ಲಿ ಕಾಂಗ್ರೆಸ್ ದಲಿತರನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿರುವುದು ಮತ್ತು ತಿರಸ್ಕಾರ ಭಾವನೆಯಿಂದ ನೋಡುತ್ತಿರುವುದು ಪಕ್ಷದೊಳಗೆ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ತೋರಿಸುತ್ತದೆ.
ಆ ಪಕ್ಷದ ನಿಲುವುಗಳು ಈಗ ಸರಿಯಾಗಿಲ್ಲ ಎಂದ ಮೇಲೆ ಭವಿಷ್ಯದಲ್ಲಿ ನಾವು ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯ? ಹೀಗಾಗಿ ದಲಿತರು ಕಾಂಗ್ರೆಸ್ ಅಥವಾ ಬಿಜೆಪಿಗೆ ಮತ ನೀಡಿ ತಮ್ಮ ಮತವನ್ನು ವ್ಯರ್ಥ ಮಾಡಬಾರದು” ಎಂದು ಮಾಯಾವತಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
“ದಲಿತರು ಬಿಎಸ್ಪಿಗೆ ಸಾಮೂಹಿಕವಾಗಿ ಮತ ಚಲಾಯಿಸಬೇಕು. ದಲಿತರ ಹಿತಾಸಕ್ತಿ ರಕ್ಷಿಸಲು, ಅವರ ಕಲ್ಯಾಣ ಖಚಿತ ಪಡಿಸಿಕೊಳ್ಳಲು ಮತ್ತು ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ನಿರಂತರವಾಗಿ ಹೋರಾಡುವ ಏಕೈಕ ಪಕ್ಷ ಬಿಎಸ್ಪಿ ಎಂದು ಪ್ರತಿಪಾದಿಸಿದರು.
ಕಾಂಗ್ರೆಸ್, ಬಿಜೆಪಿ ಅಥವಾ ಇತರ ಯಾವುದೇ ಮೈತ್ರಿಕೂಟಗಳ ಸುಳ್ಳು ಭರವಸೆಗಳಿಂದ ಪ್ರಭಾವಿತರಾಗದಂತೆ ಜಮ್ಮು ಮತ್ತು ಕಾಶ್ಮೀರದ ದಲಿತ ಸಮುದಾಯಕ್ಕೆ ಮನವಿ ಮಾಡಿದರು. ಆ ಪಕ್ಷಗಳ ದಲಿತ ವಿರೋಧಿ ಇತಿಹಾಸ ಗಮನದಲ್ಲಿಟ್ಟುಕೊಂಡು, ದಲಿತರು ತಮ್ಮ ಮತಗಳನ್ನು ಬಿಎಸ್ಪಿಗೆ ಮಾತ್ರ ಚಲಾಯಿಸಬೇಕು ಎಂದು ಹೇಳಿದರು.
ಅಕ್ಟೋಬರ್ 5ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್ಪಿ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್ಎಲ್ಡಿ)ದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿದ್ದು, 90 ಸ್ಥಾನಗಳ ಪೈಕಿ 37 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪ್ರಸ್ತುತ, ಹರಿಯಾಣ ವಿಧಾನಸಭೆಯಲ್ಲಿ ಬಿಎಸ್ಪಿ ಶಾಸಕರಿಲ್ಲ. ಐಎನ್ಎಲ್ಡಿಯ ಅಭಯ್ ಚೌಟಾಲಾ ಆ ಪಕ್ಷದ ಏಕೈಕ ಶಾಸಕರಾಗಿದ್ದಾರೆ.
ಈ ಹಿಂದೆ 2014ರಿಂದ 2019ರವರೆಗೆ ಹರಿಯಾಣ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದ ಚೌಟಾಲಾ, ಪ್ರಸ್ತುತ ವಿಧಾನಸಭೆಯಲ್ಲಿ ಐಎನ್ಎಲ್ಡಿಯ ಏಕೈಕ ಪ್ರತಿನಿಧಿಯಾಗಿ ಉಳಿದಿದ್ದಾರೆ. ಎರಡೂ ಪಕ್ಷಗಳು 2024ರ ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದವು. ಆದರೆ ಆ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ಹೇಳಿಕೊಳ್ಳುವ ಯಶಸ್ಸು ಸಿಕ್ಕಿರಲಿಲ್ಲ. ಐಎನ್ಎಲ್ಡಿ ಶೇ 1.74ರಷ್ಟು ಮತ ಪಡೆದರೆ, ಬಿಎಸ್ಪಿ ಶೇ 1.28ರಷ್ಟು ಮತ ಗಳಿಸಿದೆ. ಐಎನ್ಎಲ್ಡಿ 7 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಎಸ್ಪಿ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸಿತ್ತು.