ಬೆಂಗಳೂರು: ವಿಧಾನಸೌಧದ ಮುಂದೆ ಸಿಎಂ ಸಿದ್ದರಾಮಯ್ಯ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಚಾಲನೆ ನೀಡಿದರು.
ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವ ಎಲ್ಲರಿಗೆ ಸಿಕ್ಕಾಗ ಮಾತ್ರ ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ಇಂದು ಏಕತೆಯ ಹೆಸರಿನಲ್ಲಿ ಸಮಾಜವನ್ನ ಒಡೆಯುತ್ತಿದ್ದಾರೆ. ಇದರ ಬಗ್ಗೆ ಎಚ್ಚರಿಕೆ ವಹಿಸಿ ಸಮಾಜ ಒಡೆಯುವ ವಿಚಿತ್ರಕಾರಿ ಶಕ್ತಿಗಳನ್ನ ತೊಡೆದುಹಾಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಮ್ಮ ದೇಶದಲ್ಲಿ ಅನೇಕ ಧರ್ಮ, ಜಾತಿ, ಸಂಸ್ಕೃತಿಗಳಿವೆ. ಇದಕ್ಕಾಗಿ ವೈವಿಧ್ಯತೆಯಲ್ಲಿ ಏಕತೆ ಕಾಣಬೇಕು. ಸಂವಿಧಾನದಲ್ಲಿ ಯಾವ ಜಾತಿ, ಭಾಷೆ ಮೇಲಲ್ಲ, ಕೀಳಲ್ಲ ಅಂತ ಹೇಳಿದ್ದಾರೆ. ಸ್ವಾತಂತ್ರ್ಯ ಬಂದ ಬಳಿಕ ಇದನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡಿಕೊಂಡು ಬರುತ್ತಿದ್ದೇವೆ. ಬುದ್ದ, ಬಸವ, ಅಂಬೇಡ್ಕರ್ ಅವರ ಅವಧಿಯಲ್ಲಿ ಸಂಸದೀಯ ವ್ಯವಸ್ಥೆ ಇತ್ತು. ಅನುಭವ ಮಂಟಪದ ಮೂಲಕ ಬಸವಣ್ಣ ಸಂಸದೀಯ ವ್ಯವಸ್ಥೆ ತಂದಿದ್ದರು ಎಂದರು.
ಯಾವುದೇ ಧರ್ಮ ಮೇಲಲ್ಲ, ಕೀಳಲ್ಲ. ಬುದ್ಧ- ಬಸವರ ಕಾಲದಲ್ಲೇ ಸಂಸದೀಯ ವ್ಯವಸ್ಥೆ ಇತ್ತು. ನಮ್ಮ ರಾಜ್ಯದಲ್ಲಿ, ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ನೋಡಲು ಅನುಭವ ಮಂಟಪ ಸಾಕು. ಸ್ವಾತಂತ್ರ್ಯ ಬಂದ ನಂತರ ಸಂವಿಧಾನ ರಚನೆ ಮಾಡಿದ್ದೇವೆ. ಆರ್ಥಿಕ, ಸಾಮಾಜಿಕ ಪ್ರಜಾಪ್ರಭುತ್ವ ಎಲ್ಲರಿಗೂ ಸಿಗಬೇಕು. ತಾರತಮ್ಯ ಇರುವವರೆಗೆ ರಾಜಕೀಯ ಸಮಾನತೆ ಇರಲ್ಲ ಎಂದರು.
ಸಂವಿಧಾನದ ಪೀಠಿಕೆಯನ್ನ ಅರ್ಥ ಮಾಡಿಕೊಳ್ಳಬೇಕು, ಯುವ ಸಮೂಹಕ್ಕೆ ಅರ್ಥ ಮಾಡಿಸುವ ಕೆಲಸ ಆಗ್ತಿದೆ. ಯಾರಿಗೆ ಸಂವಿಧಾನದ ಉದ್ದೇಶ ಗೊತ್ತಿದೆ, ಅವರಿಂದ ಸಮ ಸಮಾಜದ ನಿರ್ಮಾಣ ಸಾಧ್ಯ. ಸಮ ಸಮಾಜ ನಿರ್ಮಾಣ ಮುಖ್ಯ, ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಹೇಳಿದರು.
ವರ್ಲ್ಡ್ ಬುಕ್ ಆಫ್ ರೆಕಾರ್ಡ್ನಿಂದ ಪ್ರಶಸ್ತಿ: ಚಾಮರಾಜನಗರದಿಂದ ಬೀದರ್ವರೆಗೂ 2,500 ಕಿಲೋಮೀಟರ್ ಮಾನವ ಸರಪಳಿ ರಚನೆ ಮಾಡಲಾಗುತ್ತಿದ್ದು, ಅತಿ ಉದ್ದದ ಮಾನವ ಸರಪಳಿ ನಿರ್ಮಾಣ ಹಿನ್ನೆಲೆ ವರ್ಲ್ಡ್ ಬುಕ್ ಆಫ್ ರೆಕಾರ್ಡ್ನಿಂದ ಪ್ರಶಸ್ತಿ ಘೋಷಣೆಯಾಗಿದೆ. ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಪ್ರಶಸ್ತಿ ವಿಧಾನಸೌಧ ಮುಂದೆ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕಾರ ಮಾಡಿದರು.
ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ಪ್ರಿಯಾಂಕ್ ಖರ್ಗೆ, ಸಭಾಪತಿ ಬಸವರಾಜ ಹೊರಟ್ಟಿ, ಡೆಪ್ಯುಟಿ ಸ್ಪೀಕರ್ ರುದ್ರಪ್ಪಲಮಾಣಿ, ಶಾಸಕ ರಿಜ್ವಾನ್ ಹರ್ಷದ್ ಇದ್ದರು.

