ಬೆಂಗಳೂರು: ರಾಹುಲ್ ಗಾಂಧಿಯವರ ಮೇಲೆ ಬಿಜೆಪಿ ಗದಾಪ್ರಹಾರ ನಡೆಸುತ್ತಿದ್ದು, ಕೊಲೆ ಬೆದರಿಕೆಯಂತಹ ಗಂಭೀರ ಪ್ರಕರಣಗಳು ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ರಾಹುಲ್ ಗಾಂಧಿಯವರು ಇಂತಹ ಗೊಡ್ಡುಬೆದರಿಕೆಗಳಿಗೆ ಹೆದರುವುದಿಲ್ಲ. ಅವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರ ವಂಶದವರು ಹೀಗಾಗಿ ಅವರು ಹೆದರುವುದಿಲ್ಲ ಎಂದರು.
ಇಂದಿರಾ ಗಾಂಧಿ ಅವರಿಗೆ ಆದ ಗತಿಯೇ ನಿಮಗೆ ಆಗುತ್ತದೆ ಎಂದು ಬೆದರಿಸಿದ್ದಾರೆ. ರೈಲ್ವೇ ಖಾತೆ ರಾಜ್ಯ ಸಚಿವ ರವನೀತ್ ಬಿಟ್ಟು, ‘ನೀವೊಬ್ಬ ಭಯೋತ್ಪಾದಕ’ ಎಂದು ರಾಹುಲ್ ಗಾಂಧಿಗೆ ಹೀಯಾಳಿಸಿದ್ದಾರೆ. ಇಂತಹ ಪ್ರಚೋದನಾತ್ಮಕ ಹೇಳಿಕೆ ಮೂಲಕ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಪಕ್ಷದ ಶಾಸಕ ಸಂಜಯ್ ಗಾಯಕ್ವಾಡ್, ರಾಹುಲ್ ಗಾಂಧಿ ನಾಲಗೆ ಕತ್ತರಿಸಿದರೆ 11 ಲಕ್ಷ ಬಹುಮಾನ ಕೊಡುತ್ತೇವೆ ಎಂದಿದ್ದಾರೆ. ಇದು ಕೂಡ ಕೊಲೆ ಬೆದರಿಕೆಯಾಗಿದೆ. ಇವರ ಮೇಲೆ ಕೂಡಲೇ ಕೊಲೆ ಬೆದರಿಕೆ ಪ್ರಕರಣ ಹಾಕಿ, ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.
ಉತ್ತರ ಪ್ರದೇಶ ಸರಕಾರದ ಒಬ್ಬ ಮಂತ್ರಿ, ರಾಹುಲ್ ಗಾಂಧಿ ಈ ದೇಶದ ನಂ.1 ಭಯೋತ್ಪಾದಕ ಎಂದು ಹೇಳಿದ್ದಾರೆ. ಇಂತಹದೆಲ್ಲ ಹೇಳಿಕೆ ನೀಡಿದ್ದರೂ, ಸರಕಾರ, ಪೊಲೀಸರು ಏನು ಕ್ರಮ ತೆಗೆದುಕೊಂಡಿಲ್ಲದಿರುವುದು ವಿಪರ್ಯಾಸ ಎಂದರು.