ಬೆಂಗಳೂರು : ಗುತ್ತಿಗೆದಾರನಿಗೆ ಜೀವ ಬೆದರಿಕೆ ಒಡ್ಡಿ ಲಂಚ ಕೇಳಿ ಜಾತಿ ನಿಂದನೆ ಮಾಡಿದ ಆರೋಪದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಶಾಸಕ ಮುನಿರತ್ನ ಅವರ ಧ್ವನಿ ಮಾದರಿಯನ್ನು ಸಂಗ್ರಹಿಸಿ ಎಫ್ಎಸ್ಎಲ್ಗೆ ಕಳಿಸಿದ್ದೀವಿ. ಅವರ ಧ್ವನಿ ಮ್ಯಾಚ್ ಆದರೆ ಕ್ರಮ ತಗೋತೀವಿ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಮುನಿರತ್ನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದರು. ಮುನಿರತ್ನ ಅವರ ಧ್ವನಿ ಮಾದರಿ ಸಂಗ್ರಹಿಸಿ ಎಫ್ಎಸ್ಎಲ್ಗೆ ಕಳಿಸಿದ್ದೀವಿ. ಅವರ ಧ್ವನಿ ಮ್ಯಾಚ್ ಆದರೆ ಕ್ರಮ ತಗೋತೀವಿ ಎಂದು ಎಚ್ಚರಿಸಿದ್ದಾರೆ.
ಇನ್ನು ಶಾಸಕ ಮುನಿರತ್ನ ಅವರ ಏಕಾಏಕಿ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮುನಿರತ್ನ ಅವರನ್ನ ಏಕಾಏಕಿ ಬಂಧನ ಮಾಡಿಲ್ಲ. ದೂರು ದಾಖಲಾದ ಹಿನ್ನೆಲೆ ಬಂಧನ ಮಾಡಲಾಗಿದೆ. ವಾಯ್ಸ್ ರೆಕಾರ್ಡ್ ಕೂಡ ಪಡೆದಿದ್ದಾರೆ. ಮುನಿರತ್ನ ವಾಯ್ಸ್ ಸ್ಯಾಂಪಲ್ ಕೂಡ ಪಡೆದು ತನಿಖೆ ಆಗ್ತಿದೆ. ಪ್ರೂವ್ ಆದ್ರೆ ಶಿಕ್ಷೆ ಆಗುತ್ತೆ.
ಅಲ್ಲದೆ ನಮ್ಮ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಮೇಲೆ ಆರೋಪ ಕೇಳಿಬಂದಿದ್ದು, ಅವರ ಮೇಲೂ ಕ್ರಮ ಆಗುತ್ತೆ ಎಂದಿದ್ದಾರೆ.
ಇದೇ ವೇಳೆ ಪ್ಯಾಲೆಸ್ತೀನ್ ಧ್ವಜ ಪ್ರದರ್ಶಿಸಿದ ಪ್ರಕರಣದ ಕುರಿತು ಮಾತನಾಡಿದ ಅವರು, 3 ಜಿಲ್ಲೆಗಳಲ್ಲಿ ನಮಗೆ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ ಘಟನೆಗಳು ಕಂಡುಬಂದಿವೆ. ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ ಮಾಡಿದವರನ್ನೆಲ್ಲ ಬಂಧನ ಮಾಡಲಾಗಿದೆ. ಆದ್ರೆ ಕೇಂದ್ರ ಸರ್ಕಾರದವರೇ ಪ್ಯಾಲೆಸ್ತೀನ್ಗೆ ನಮ್ಮ ಬೆಂಬಲ ಇದೆ ಅಂತ ಹೇಳಿಕೆ ಕೊಟ್ಟಿದ್ದಾರೆ. ಹೀಗಿರುವಾಗ ಧ್ವಜ ತೋರಿಸುವುದರಲ್ಲಿ ತಪ್ಪೇನಿದೆ ಅಂತ ಅವ್ರು ವಾದ ಮಾಡ್ತಾರೆ. ಆದರೂ ಕೂಡ ನಾವು ಅವರನ್ನು ಬಂಧಿಸಿದ್ದೇವೆ ಎಂದು ಹೇಳಿದ್ದಾರೆ.
ಪ್ಯಾಲೆಸ್ತೀನ್ ಧ್ವಜ ಹಾರಿಸಲು ಯಾರು ಪ್ರಚೋದನೆ ಕೊಟ್ರು ಅಂತ ತನಿಖೆ ಮಾಡ್ತಿದ್ದೇವೆ. ಎಲ್ಲ ಚಿಕ್ಕ ಚಿಕ್ಕ ಹುಡುಗರಿಗೆ 17, 18 ವರ್ಷದ ಹುಡುಗರಿಗೆ ಪ್ರಚೋದನೆ ಕೊಟ್ಟಿದ್ದಾರೆ ಅಂತ ಮಾಹಿತಿ ಬಂಧ ಮೇಲೆ ಬಂಧಿಸಿದ್ದೇವೆ ಎಂದು ಗೃಹ ಸಚಿವರು ವಿವರಿಸಿದ್ದಾರೆ.
ನಾಗಮಂಗಲ ಗಲಭೆ ಬಗ್ಗೆ ಡಿಸೈನ್ ಮಾಡ್ಕೊಂಡಿದ್ದಾರೆ:
ಇದೇ ವೇಳೆ ನಾಗಮಂಗಲ ಗಣೇಶನ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಕೋಮು ಗಲಭೆ ವಿಚಾರ ಕುರಿತು ಮಾತನಾಡಿದ ಗೃಹ ಸಚಿವ ಪರಮೇಶ್ವರ್, ‘ನಾಗಮಂಗಲ ಪ್ರಕರಣವನ್ನೇ ದೊಡ್ಡ ವಿಷಯ ಮಾಡಲು ಬಿಜೆಪಿಯವ್ರು ಮಾತಾಡಿಕೊಂಡಿದ್ದಾರೆ. ನಾವು ಕಾನೂನು ಪ್ರಕಾರ ಮುಲಾಜಿಲ್ಲದೇ ಕ್ರಮ ತಗೋತಿದ್ದೀವಿ. ಆದ್ರೆ ಬಿಜೆಪಿಯವ್ರು ದಿನಕ್ಕೊಂದು ಹೇಳಿಕೆ ಕೊಡ್ತಿದ್ದಾರೆ. ಆ ರೀತಿ ದಿನಕ್ಕೊಬ್ಬರು ಒಂದೊಂದು ಹೇಳಿಕೆ ಕೊಡಬೇಕು ಅಂತ ಅವರು ಡಿಸೈನ್ ಮಾಡಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.