ಬೆಂಗಳೂರು: ಜಾತಿನಿಂದನೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಬಿಜೆಪಿ ಶಾಸಕ ಮುನಿರತ್ನ ಜಾಮೀನು ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು, ಆದೇಶವನ್ನು ನ್ಯಾಯಾಲಯ ನಾಳೆಗೆ ಕಾಯ್ದಿರಿಸಿದೆ.
ಮಂಗಳವಾರ ಮುನಿರತ್ನ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ನೆನ್ನೆ ರಾತ್ರಿಯೇ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನಗರದ 82 ನೇ ಸಿಸಿಎಚ್ ನ್ಯಾಯಾಲಯ ಜಾಮೀನು ಆದೇಶವನ್ನು ಗುರುವಾರಕ್ಕೆ ಕಾಯ್ದಿರಿಸಿದೆ.
ಆರೋಪಿ ಮುನಿರತ್ನ ಪರ ಅಶೋಕ್ ಹಾರನಹಳ್ಳಿ ವಾದ ಮಂಡನೆ ಮಾಡಿ, ಪ್ರಕರಣ ರಾಜಕೀಯ ಪ್ರೇರಿತ ಎಂದು ಆರೋಪಿಸಿ, ಜಾಮೀನು ಮಂಜೂರು ಮಾಡುವಂತೆ ಮಾಡಿಕೊಂಡರು.
ಸರಕಾರದ ಪರ ವಾದ ಮಂಡನೆ ಮಾಡಿದ ಎಸ್ ಪಿಪಿ ಪ್ರದೀಪ್, ಪ್ರಕರಣ ಶಾಸಕರ ಕಚೇರಿಯಲ್ಲಿ ನಡೆದಿದ್ದು, ಸಾರ್ವಜನಿಕ ಸ್ಥಳದಲ್ಲಿ ದಲಿತರಿಗೆ ಅವಮಾನವಾಗಿದೆ. ಹೀಗಾಗಿ, ಮುನಿರತ್ನಗೆ ಜಾಮೀನು ನೀಡಬಾರದು ಎಂದು ವಾದಿಸಿದರು.
ಎರಡು ಕಡೆಯ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಮೂರ್ತಿಗಳು, ಜಾಮೀನು ಅರ್ಜಿಯ ಆದೇಶವನ್ನು ನಾಳೆಗೆ ಮುಂದೂಡಿದರು. ನಾಳೆ ಮುನಿರತ್ನ ಜಾಮೀನು ಭವಿಷ್ಯ ನಿರ್ಧಾರವಾಗಲಿದ್ದು, ಜಾಮೀನು ಸಿಕ್ಕಿದರೆ ಬಿಡುಗಡೆಯಾಗಲಿದ್ದಾರೆ. ಇಲ್ಲವಾದಲ್ಲಿ, ಅವರು ಪರಪ್ಪನ ಅಗ್ರಹಾರದಲ್ಲಿಯೇ 14 ದಿನಗಳನ್ನು ಕಳೆಯಬೇಕಾಗುತ್ತದೆ.