ಬೆಳಗಾವಿ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಟ ದರ್ಶನ್ ಹಾಗೂ ಇತರೆ ರೌಡಿಶೀಟರ್ಗಳಿಗೆ ವಿಶೇಷ ಆತಿಥ್ಯ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ ನಾಗರಾಜ್ ಸೇರಿದಂತೆ 20 ವಿಚಾರಣಾಧೀನ ಕೈದಿಗಳನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ರವಿವಾರ ಸ್ಥಳಾಂತರಿಸಲಾಗಿದೆ. ಬಿಗಿ ಭದ್ರತೆ ಮಧ್ಯೆ ಕೈದಿಗಳನ್ನು ಕರೆದೊಯ್ಯಲಾಯಿತು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರು ಒಂದು ಕೈನಲ್ಲಿ ಕಾಫಿ ಕಪ್, ಮತ್ತೊಂದು ಕೈನಲ್ಲಿ ಸಿಗರೇಟ್ ಹಿಡಿದುಕೊಂಡಿದ್ದ ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಈ ಫೋಟೊದಲ್ಲಿ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ, ದರ್ಶನ್, ದರ್ಶನ್ ವ್ಯವಸ್ಥಾಪಕ ನಾಗರಾಜ ಕಾಣಿಸಿಕೊಂಡಿದ್ದರು.
ವಿಶೇಷ ಆತಿಥ್ಯ ನೀಡಿದ್ದ ಪ್ರಕರಣದಲ್ಲಿ ಮೂರು ಎಫ್ಐಆರ್ಗಳು ದಾಖಲಾಗಿದ್ದವು. ಅದಾದ ಮೇಲೆ, ನ್ಯಾಯಾಲಯದ ಅನುಮತಿ ಪಡೆದು ದರ್ಶನ್ ಅವರನ್ನು ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು. ಈಗ ನಾಗನನ್ನು ಸ್ಥಳಾಂತರ ಮಾಡಲಾಗಿದೆ. ಈ ಮೊದಲು ಹಿಂಡಲಗಾ ಜೈಲಿಗೆ ಪ್ರದೋಷ್ ನನ್ನು ಸಹ ಕರೆ ತರಲಾಗಿತ್ತು.
