ಮೈಸೂರು: ಮುಡಾ ಹಗರಣದಲ್ಲಿ ಸಚಿವ ಭೈರತಿ ಸುರೇಶ್ ಕೂಡ ಭಾಗಿಯಾಗಿರುವುದರಿಂದ ಅವರು ಕೂಡ ಆರೋಪಿಯಾಗಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಹಗರಣ ಕುರಿತು ದಾಖಲಾಗಿರುವ ಎಫ್ಐಆರ್ನಲ್ಲಿ ಎ5ನಲ್ಲಿ ಇತರರು ಎಂದು ಉಲ್ಲೇಖ ಮಾಡಿದ್ದು, ಇದರಲ್ಲಿ ಸಚಿವ ಭೈರತಿ ಸುರೇಶ್ ಸೇರಿದಂತೆ ಮೈಸೂರು ಭಾಗದ ಶಾಸಕರು, ಸಂಸದರು, ಅಧಿಕಾರಿಗಳು ಮತ್ತು ಪ್ರಭಾವಿಗಳು ತನಿಖೆ ಹಂತದಲ್ಲಿ ಆರೋಪಿಗಳಾಗಲಿದ್ದಾರೆ ಎಂದು ಹೇಳಿದರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರೇ ಫಲಾನುಭವಿಯಾಗಿದ್ದು, ಅವರ ಪತ್ನಿ ಹೆಸರಿಗೆ ಮಾತ್ರ ನಿವೇಶನ ಪಡೆದಿದ್ದಾರೆ. ಈ ಹಿನ್ನೆಲೆ ಸಿದ್ದರಾಮಯ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲರೂ ಆರೋಪಿಯಾಗಿದ್ದಾರೆ ಎಂದರು.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು 62 ಕೋಟಿ ಹಣದ ಬಗ್ಗೆ ಹೇಳಿದ್ದಾರೆ. ಜೊತೆಗೆ ಮುಡಾದಲ್ಲಿ 5 ಸಾವಿರ ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿದೆ. ಹೀಗಾಗಿ ಜಾರಿ ನಿರ್ದೇಶನಾಲಯದ ತನಿಖೆ ಅವಶ್ಯಕತೆ ಇದೆ. ಈ ಬಗ್ಗೆ ಇಡಿ ಅಧಿಕಾರಿಗಳಿಗೆ ಇ-ಮೇಲ್ ಮೂಲಕ ದೂರು ನೀಡಿದ್ದೇನೆ. ಸೋಮವಾರ ಇಡಿ ಕಚೇರಿಗೆ ತೆರಳಿ ದೂರು ದಾಖಲಿಸುತ್ತೇನೆ ಎಂದು ತಿಳಿಸಿದ್ದಾರೆ.