ಬೆಂಗಳೂರು: ಸಿದ್ದರಾಮಯ್ಯ ಅವರ ಸ್ಥಾನವೇನಾದರೂ ಬದಲಾವಣೆಯಾದರೆ, ದಲಿತರಿಗೆ ಸಿಎಂ ಸ್ಥಾನ ಕೊಡಬೇಕು ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಆಗ್ರಹಿಸಿದರು.
ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಮಾತನಾಡಿದ ಅವರು, ಸಮಾನತೆ, ಸಾಮಾಜಿಕ ನ್ಯಾಯವನ್ನು ಬರೀ ಮಾತಿನಲ್ಲಿ ಹೇಳುವುದಲ್ಲ, ಬದಲಾಗಿ ವಿಧಾನಸೌಧದಲ್ಲಿ ದಲಿತರಿಗೆ ಅಧಿಕಾರ ಕೊಟ್ಟು ಸಾಬೀತು ಮಾಡಬೇಕು ಎಂದು ಅವರು ಸವಾಲು ಹಾಕಿದರು.
ಯಾವುದೇ ಪಕ್ಷವಾಗಲೀ, ದಲಿತರಿಗೆ ಸಿಎಂ ಸ್ಥಾಮ ಕೊಡುವ ಕೆಲಸವಾಗಲೇ ಬೇಕು. ಇಲ್ಲವಾದಲ್ಲಿ ಶೋಷಿತರ ಬೀದಿಗೆ ಮತ ಕೇಳಲು ತಲೆ ಎತ್ತಿ ಬರುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
ಅನೇಕ ಸಮುದಾಯಗಳಲ್ಲಿ ಇನ್ನು ಒಂದು ಗ್ರಾಮಪಂಚಾಯಿತಿ ಸದಸ್ಯರೂ ಆಗದಂತಹ ಸ್ಥಿತಿಯಿದೆ. ಹೀಗಾಗಿ, ಜಾತಿಗಣತಿ ಜಾರಿಯಾದರೆ ತಪ್ಪೇನು? ಬರೀ ವಿರೋಧಿಸುವ ಜಾತಿಗಳಿಗೆ ಮಾತ್ರ ಸರಕಾರ ಇದೆಯಾ? ಎಂದು ಖಾರವಾಗಿ ಪ್ರಶ್ನಿಸಿದರು.
ಜಾತಿ ಗಣತಿಗೆ ವಿರೋಧ ಮಾಡುತ್ತಿರುವ ಒಂದು ಸಮುದಾಯದಲ್ಲಿ 11 ಜನ ಮುಖ್ಯಮಂತ್ರಿ ಆಗಿದ್ದಾರೆ. ಮತ್ತೊಂದು ಸಮುದಾಯದಲ್ಲಿ ಕೂಡ 11 ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ, 1.6 ಕೋಟಿ ಜನಸಂಖ್ಯೆಯ ದಲಿತ ಸಮುದಾಯ ಸುಮ್ಮನೆ ಅವರ ಜೋತದಾಳುಗಳಂತೆ ಇರಬೇಕಾ? ಎಂದು ಪ್ರಶ್ನೆ ಮಾಡಿದರು.