ಬೆಂಗಳೂರು : ಕಂಠೀರವ ಸ್ಟುಡಿಯೋದ ಮುಖ್ಯ ರಸ್ತೆಯಲ್ಲಿ ಭೂಗತ ಕೇಬಲ್ ಅಳವಡಿಸುವ ಕಾಮಗಾರಿಗಾಗಿ ತೋಡಿದ್ದ ಕಂದಕ್ಕೆ ಅಡ್ಡವಾಗಿ ಬ್ಯಾರಿಕೇಡ್ ಹಾಕಿದ್ದರೂ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿ ಅದಕ್ಕೆ ಡಿಕ್ಕಿ ಹೊಡೆದು ಬಿದ್ದಿದ್ದಾನೆ ಹೊರತು ಇಲಾಖೆಯ ನಿರ್ಲಕ್ಷ್ಯದಿಂದ ಅಲ್ಲ ಎಂದು ಕೆಪಿಟಿಸಿಎಲ್ ಗುರುವಾರ ಸ್ಪಷ್ಟಡಿಸಿದೆ.
ಈ ಸಂಬಂಧ ಮಾಧ್ಯಗಳಲ್ಲಿ ಪ್ರಸಾರವಾಗಿರುವ ವರದಿಯಲ್ಲಿ ಕೆಪಿಟಿಸಿಎಲ್ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ, ಇದು ಸತ್ಯಕ್ಕೆ ದೂರವಾದುದು. ದ್ವಿಚಕ್ರ ವಾಹನದಲ್ಲಿದ್ದ ವ್ಯಕ್ತಿಯು ಮದ್ಯದ ಅಮಲಿನಲ್ಲಿ ಇದ್ದುದರಿಂದ ಅವಘಡ ಸಂಭವಿಸಿದೆ ಎಂದು ಕೆಪಿಟಿಸಿಎಲ್ ಪ್ರಕಟಣೆ ತಿಳಿಸಿದೆ.
ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಲಾರ್ಸನ್ ಮತ್ತು ಟೂಬ್ರೊ (ಎಲ್ & ಟಿ) ಸಹಯೋಗದೊಂದಿಗೆ ಪೀಣ್ಯದಿಂದ ಆನಂದ್ ರಾವ್ ವೃತ್ತದವರೆಗೆ 220 ಕೆವಿ ಭೂಗತ ಕೇಬಲ್ (ಯುಜಿ) ಅಳವಡಿಸುವ ಕಾಮಗಾರಿ ಕೈಗೊಂಡಿದೆ. ಈ ಯೋಜನೆಯ ಭಾಗವಾಗಿ, ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಂದಕದ ಉದ್ದಕ್ಕೂ ಬ್ಯಾರಿಕೇಡ್ಗಳನ್ನು ಅಳವಡಿಸುವುದು ಸೇರಿದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಮೋಟಾರು ಸೈಕಲ್ ಸವಾರ ಕಂದಕಕ್ಕೆ ಬಿದ್ದ ಘಟನೆ ಇತ್ತೀಚೆಗೆ ವರದಿಯಾಗಿದೆ. ಪೊಲೀಸರು ಮತ್ತು ಸಾರ್ವಜನಿರ ಪ್ರಕಾರ, ವ್ಯಕ್ತಿಯು ಮದ್ಯದ ಅಮಲಿನಲ್ಲಿ ದುಡುಕಿನ ಚಾಲನೆಯಲ್ಲಿ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ಕಂದಕಕ್ಕೆ ಬಿದ್ದದ್ದ. ತಕ್ಷಣವೇ ಆತನನ್ನು ಪ್ರಥಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ನಂತರ ಡಿಸ್ಚಾರ್ಜ್ ಮಾಡಲಾಗಿದೆ. ಸದ್ಯ ಮೋಟಾರ್ ಸೈಕಲ್ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ವಶದಲ್ಲಿದೆ.
ತನ್ನ ಕಡೆಯಿಮದ ಯಾವುದೇ ನಿರ್ಲಕ್ಷ್ಯ ಆಗಿಲ್ಲ ಎಂದು ಸ್ಪಷ್ಟಪಡಿಸಿರುವ ಕೆಪಿಟಿಸಿಎಲ್, ಘಟನೆಯ ಬಳಿಕ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಸುರಕ್ಷತೆಗಾಗಿ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದೆ.
ಯುಜಿ ಕೇಬಲ್ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಈ ವೇಳೆ ಆಗುವ ಅನಾನುಕೂಲತೆಗಾಗಿ ವಿಷಾದಿಸಿರುವ ಕೆಪಿಟಿಸಿಎಲ್, ಸಾರ್ವಜನಿಕರ ಸಹಕಾರವನ್ನು ಕೋರಿದೆ.