ಚಿಕ್ಕಮಗಳೂರು: ಕಾಫಿ ತೋಟದ ರಸ್ತೆಯಲ್ಲಿ ಪ್ರೇಮಿಗಳಿಬ್ಬರ ಶವ ಪತ್ತೆ: ಆತ್ಮಹತ್ಯೆಯೋ, ಕೊಲೆಯೋ?
ಚಿಕ್ಕಮಗಳೂರು: ನಗರದ ಹೊರವಲಯದ ದಾಸನಪುರ ಬಳಿ ಪ್ರೇಮಿಗಳಿಬ್ಬರ ಶವ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ ಕೊಲೆಯೋ ಎಂಬ ಶಂಕೆ ಮೂಡಿದೆ.
ತಾಲೂಕಿನ ದಾಸನಪುರ ಗ್ರಾಮದ ಬಳಿಯ ಕಾಫಿ ತೋಟದ ರಸ್ತೆಯಲ್ಲಿ ಕಾರು ನಿಂತಿದ್ದು ಕಾರಿನಲ್ಲಿ ಯುವತಿಯ ಶವವಿದ್ದರೆ, ಕಾಫಿ ತೋಟದ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮೃತದೇಹಗಳನ್ನು ಚಿಕ್ಕಮಗಳೂರು ಸರಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದು, ಶವಪರೀಕ್ಷೆ ನಡೆಸಲು ಸಿದ್ಧತೆ ನಡೆದಿದೆ.
ಮೃತರನ್ನು ಚಿಕ್ಕಮಗಳೂರು ತಾಲೂಕಿನ ಪೂರ್ಣಿಮಾ ಹಾಗೂ ಭದ್ರಾವತಿಯ ಮಧು ಎಂದು ಗುರುತಿಸಲಾಗಿದೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮನೆಯವರ ವಿರೋಧದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ. ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.


