ಬೆಳಗಾವಿ: ಫೈನಾನ್ಸ್ ಕಂಪನಿ ಸಿಬ್ಬಂದಿ ಕಿರುಕುಳದಿಂದ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರೂರ ಗ್ರಾಮದ ಸರೋಜಾ ಕಿರಬಿ (52) ಬುಧವಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಯಮನಾಪುರ ಗ್ರಾಮದ ಹೊಳೆಪ್ಪ ದಡ್ಡಿ ಹಾಗೂ ಕುಟುಂಬದ ಇತರ ನಾಲ್ವರು ಸೇರಿ ಸ್ವಸಹಾಯ ಸಂಘ ತೆರೆದಿದ್ದರು. ಸರೋಜಾ ಅವರು ಹೆಚ್ಚಿನ ರಿಯಾಯಿತಿ ಸಿಗುತ್ತದೆ ಎಂಬ ಆಸೆಗೆ ದಡ್ಡಿ ಅವರ ಸಂಸ್ಥೆಯಿಂದ ಸಾಲ ಪಡೆದಿದ್ದರು. ಅರ್ಧದಷ್ಟು ಸಾಲ ಮಾತ್ರ ನೀವು ತುಂಬಬೇಕು, ಇನ್ನರ್ಧ ನಮ್ಮ ಸಂಸ್ಥೆ ಭರಿಸುತ್ತದೆ’ ಎಂದು ಸರೋಜಾ ಅವರನ್ನು ನಂಬಿಸಲಾಗಿತ್ತು ಎಂದು ಕಾಕತಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಹೊಳೆಪ್ಪ ದಡ್ಡಿ ಮತ್ತು ಕುಟುಂಬದವರು 7,000 ಮಹಿಳೆಯರನ್ನು ಈ ರೀತಿ ವಂಚಿಸಿದ್ದಾರೆ ಎಂಬ ಕಾರಣಕ್ಕೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಆದರೆ, ಪಡೆದ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ತುಂಬಬೇಕು ಎಂದು ಫೈನಾನ್ಸ್ನವರು ಸರೋಜಾ ಸೇರಿ ಹಲವರಿಗೆ ಕಿರುಕುಳ ನೀಡಿದ್ದಾರೆ. ಇದರಿಂದ ಮನನೊಂದು ಸರೋಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.