ಬೆಂಗಳೂರು: ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಏಕರೂಪದ ಟಿಕೆಟ್ ದರವನ್ನು ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಜಾರಿ ಮಾಡಲಿದ್ದೇವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.
ವಿಧಾನಪರಿಷತ್ನಲ್ಲಿ ಸದಸ್ಯ ಗೋವಿಂದ್ ರಾಜ್ ಅವರು, ಬೆಂಗಳೂರು ಚಿತ್ರಮಂದಿರಗಳಿಂದ ರಾಜ್ಯಸರ್ಕಾರಕ್ಕೆ ಎಷ್ಟು ಆದಾಯ ಬಂದಿದೆ? ಏಕರೂಪ ಟೀಕೆ ದರವನ್ನು ನಿಗದಿಪಡಿಸಲು ರಾಜ್ಯಸರ್ಕಾರಕ್ಕೆ ಯಾಕೆ ಸಾಧ್ಯವಿಲ್ಲ? ಹಲವು ಚಿತ್ರ ಮಂದಿರಗಳನ್ನು ಬಂದ್ ಮಾಡಲಾಗಿದೆ. ಇದಕ್ಕೆ ಸರ್ಕಾರದ ಕ್ರಮ ಏನು ತೆಗೆದುಕೊಂಡಿದೆ? ಎಂದು ಪ್ರಶ್ನೆ ಮಾಡಿದರು.
ಈ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್ ಅವರು ಹೀಗೆ ಉತ್ತರಿಸಿದರು: ಚಿತ್ರಮಂದಿರಗಳಿಗೆ ಟಿಕೆಟ್ ದರವನ್ನು ಚಿತ್ರಮಂದಿರಗಳ ಮಾಲೀಕರೇ ನಿರ್ಧಾರ ಮಾಡುವ ಪದ್ಧತಿ ಇದೆ. ಅವಶ್ಯಕ ಎನಿಸಿದಾಗ ದರ ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ಮುಂದಿನ ದಿನಗಳಲ್ಲಿ ಏಕರೂಪದ ಟಿಕೆಟ್ ದರವನ್ನು ನಿಗದಿಪಡಿಸುವ ಸಂಬಂಧ ಸಂಬಂಧಪಟ್ಟವರ ಜೊತೆ ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದರು.
“ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಬಹುಪರದೆಗಳನ್ನು ಹೊಂದಿವೆ. ಇದರಿಂದ ಕನ್ನಡ ಭಾಷಾ ಚಿತ್ರಗಳಿಗೆ ಯಾವುದೇ ತೊಂದರೆ ಆಗಿಲ್ಲ. ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ಕೊರತೆ ಸರ್ಕಾರದ ಗಮನಕ್ಕೆ ಬಂದಿದೆ. ಅನ್ಯಭಾಷೆಗಳ ಸಿನಿಮಾಗಳಿಗೆ ಮಾತ್ರ ಟಿಕೆಟ್ ದರ ಹೆಚ್ಚಳ ಮಾಡುತ್ತಿರುವ ಬಗ್ಗೆ ದೂರು ಬಂದಿಲ್ಲ” ಎಂದು ಗೃಹ ಸಚಿವ ಪರಮೇಶ್ವರ್ ಪುನರುಚ್ಚರಿಸಿದರು.