ಬೆಂಗಳೂರು: ನಗರದಲ್ಲಿ ಪ್ರತಿ 1 ಲೀಟರ್ ಕಾವೇರಿ ನೀರಿಗೆ 1 ಪೈಸೆ ಹೆಚ್ಚಿಸಲು ರಾಜ್ಯಸರ್ಕಾರ ತೀರ್ಮಾನಿಸಿದೆ ಎಂದು ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಪರಿಷತ್ನಲ್ಲಿ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿಗೌಡ ಪ್ರಶ್ನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತರಿಸಿದರು.
“ಬೇಸಿಗೆ ಕಾಲದಲ್ಲಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಅನೇಕ ಕ್ರಮ ತೆಗೆದುಕೊಳ್ತಿದ್ದೇವೆ. ಮಾರ್ಚ್ 22ರಂದು ವಿಶ್ವ ಜಲ ದಿನ ಇದೆ. ಹೀಗಾಗಿ ಅಂದಿನಿಂದ ಒಂದು ತಿಂಗಳ ಕಾಲ ʻನೀರು ಉಳಿಸಿʼ ಅಭಿಯಾನ ಹಮ್ಮಿಕೊಂಡಿದ್ದೇವೆ’ ಎಂದು ಅವರು ತಿಳಿಸಿದರು.
‘ಅಪಾರ್ಟ್ಮೆಂಟ್ಗಳಲ್ಲಿ ಕೆಲವರು ಯಾವುದೇ ಅನುಮತಿ ಇಲ್ಲದೇ ಬೋರ್ವೆಲ್ ಕೊರೆದಿದ್ದಾರೆ. ಅವರಿಗೆ ನೋಟೀಸ್ ಕೊಡುವ ಕೆಲಸ ಮಾಡಿದ್ದೇವೆ. 2014 ರಿಂದ ಇಲ್ಲಿವರೆಗೂ ನೀರಿನ ದರ ಏರಿಕೆ ಮಾಡಿಲ್ಲ. ಹೀಗಾಗಿ 1 ಪೈಸೆ ಆದರೂ ಜಾಸ್ತಿ ಮಾಡಬೇಕು ಅಂತ ತೀರ್ಮಾನ ಮಾಡಲಾಗಿದೆ. ಪ್ರತಿ ಲೀಟರಿಗೆ 6ರಿಂದ 7 ಪೈಸೆ ಜಾಸ್ತಿ ಮಾಡಬೇಕು ಅಂತ BWSSBಯವರು ಮನವಿ ಮಾಡಿದ್ರು. ಆದರೆ ನಾನು 1 ಪೈಸೆ ಏರಿಕೆ ಮಾಡಲು ಮಾತ್ರ ಒಪ್ಪಿಗೆ ಕೊಟ್ಟಿದ್ದೇನೆ’ ಎಂದು ಜಲಸಂಪನ್ಮೂಲ ಸಚಿವ-ಡಿಸಿಎಂ ಡಿ.ಕೆ ಶಿವಕುಮಾರ್ ವಿವರಿಸಿದರು.
“ಈಗ ಬಿಬಿಎಂಪಿ ಬಜೆಟ್ ಮೀಟಿಂಗ್ ಮಾಡುತ್ತೇನೆ. ಆಗ ಬೆಂಗಳೂರಿನ ಎಲ್ಲಾ ಶಾಸಕರ ಸಭೆ ಕರೆದು ನೀರಿನ ದರ ಏರಿಕೆ ಬಗ್ಗೆ ಅಂತಿಮ ನಿರ್ಧಾರ ಮಾಡ್ತೀವಿ. ಅಂಡರ್ ಗ್ರೌಂಡ್ ವಾಟರ್ ಹೆಚ್ಚಿಸಲು ಎಲ್ಲಾ ಕೆರೆ ತುಂಬಿಸೋ ಯೋಚನೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.