ನನಗೆ ಹಲವು ಕಡೆಗಳಿಂದ ಜೀವ ಬೆದರಿಕೆ ; ಸ್ಪೀಕರ್ ಯುಟಿ ಖಾದರ್
ಬೀದರ್:ಅಂಡರ್ವರ್ಲ್ಡ್ ಸೇರಿ ಹಲವು ಕಡೆಗಳಿಂದ ಈ ಹಿಂದೆ ಕೆಲವು ಬಾರಿ ನನಗೆ ಜೀವ ಬೆದರಿಕೆ ಕರೆಗಳು ಬಂದಿವೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಪಿಎಫ್ಐನಿಂದ ಯು.ಟಿ.ಖಾದರ್ಗೆ ಜೀವ ಬೆದರಿಕೆ ಬಂದಿದೆ ಎಂಬ ಅನುಪಮಾ ಶೆಣೈ ಹೇಳಿಕೆಗೆ ಗುರುವಾರ ಬೀದರನಲ್ಲಿ ಪ್ರತಿಕ್ರಿಯಿಸಿದ ಅವರು, ನನಗಾಗಿ ಮಂಗಳೂರಿನಲ್ಲಿ ಎನ್ಐಎ ಸ್ಥಾಪನೆ ಮಾಡುವುದು ಬೇಡ, ಜಿಲ್ಲೆಯ ಜನಕ್ಕಾಗಿ ಮಾಡುವುದಾದರೆ ಮಾಡಲಿ.
ಎಲ್ಲಿ ಹುಟ್ಟಬೇಕು?ಎಲ್ಲಿ ಸಾಯಬೇಕು?ಅದನ್ನು ದೇವರು ಬರೆದಿದ್ದಾನೆ. ನೆಮ್ಮದಿಯಾಗಿ ಸಾಯುವ ಪರಿಸ್ಥಿತಿ ದೇವರು ಮಾಡಿಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ದೇವರು ಇಟ್ಟಂತೆ ಇರಲಿ, ನಮ್ಮ ಕೈಯಲ್ಲಿ ಏನು ಇಲ್ಲ ಎಂದು ಹೇಳಿದರು.
ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ಖಂಡನೀಯ. ದಾಳಿಕೋರರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವದರ ಜೊತೆಗೆ ಅದರ ಹಿಂದೆ ಯಾರಿದ್ದಾರೋ ಅವರನ್ನು ಮಟ್ಟ ಹಾಕುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು. ದೇಶದ ಜನರು ಮೋದಿಯವರಿಂದ ಇದನ್ನೇ ಅಪೇಕ್ಷೆ ಪಡುತ್ತಾರೆ. ದಾಳಿಗೊಳಗಾದ ಜನರಿಗೆ ಮಾತ್ರವಲ್ಲ, ಇಡಿ ದೇಶದ ಜನರಿಗೆ ನ್ಯಾಯಕೊಡುವ ಕೆಲಸ ಕೇಂದ್ರ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.
ದೇಶದ ಸೌಹಾರ್ದತೆಯನ್ನು ಕದಡುವುದು ಭಯೋತ್ಪಾದಕ ಕೃತ್ಯದ ಉದ್ದೇಶವಾಗಿದ್ದು, ಜಾತ್ಯಾತೀತತೆಯನ್ನು ಹಾಳು ಮಾಡಿ, ದೇಶವನ್ನು ದುರ್ಬಲಗೊಳಿಸುವುದು ಅವರ ಗುರಿಯಾಗಿದೆ. ಈ ಕೃತ್ಯದ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಅದನ್ನೆಲ್ಲ ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು. ಯುದ್ಧ ಮಾಡಬೇಕಾ ಅಥವಾ ಬೇಡವಾ ಎನ್ನುವುದು ಮೋದಿ ಹಾಗೂ ಸರ್ವಪಕ್ಷಗಳಿಗೆ ಬಿಟ್ಟಿದ್ದು ಎಂದರು.
ಕೇಂದ್ರದಿಂದ ಜನಗಣತಿ ಜತೆಗೆ ಜಾತಿಗಣತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದು ಕೇಂದ್ರ ಮತ್ತು ರಾಜ್ಯಕ್ಕೆ ಬಿಟ್ಟಿದ್ದು, ಆಡಳಿತ ಪಕ್ಷ, ಪ್ರತಿಪಕ್ಷಗಳಿಗೆ ಮಿತ್ರನಾಗಿ ನಾನು ಸ್ಪೀಕರ್ ಆಗಿದ್ದೇನೆ. ನನ್ನ ಬಾಯಿಗೆ ಈಗ ಬೀಗ ಹಾಕಿದ್ದು, ನನ್ನ ಪ್ರಕಾರ ನಾನೂ ಮಾತನಾಡಿದ್ದೇನೆ ಎಂದು ಹೇಳಿದರು.


