ಬೆಂಗಳೂರು : ಮನೆಯಲ್ಲಿ ಒಂದು ಮಗುವನ್ನೇ ನೋಡಿಕೊಳ್ಳುವುದು ಕಷ್ಟಕರವಾಗಿರುವಾಗ ನೂರಾರು ಪುಟ್ಟ ಪುಟ್ಟ ಮಕ್ಕಳನ್ನು ತಿದ್ದಿ ತೀಡಿ ಶಿಕ್ಷಣ ನೀಡುವಂಥದ್ದು ಅತ್ಯಂತ ಸವಾಲಿನ ಸಂಗತಿಯಾಗಿದೆ ಎಂದು ಇಲ್ಲಿನ ಕಿಡ್ಸ್ ಕಿಂಗ್ಡಮ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗೋವಿಂದರಾಜನಗರದ ಶಾಸಕ ಪ್ರಿಯಾ ಕೃಷ್ಣ ಹೇಳಿದರು.
ಇಂದಿನ ಪೀಳಿಗೆ ಶಿಶುವಿಹಾರಗಳಲ್ಲಿ ಪಠ್ಯದ ಶಿಕ್ಷಣದ ಜೊತೆಗೆ ಪಠ್ಯೇತರ ಶಿಕ್ಷಣಗಳಾದ ವಿವಿಧ ಕಲಾ ಪ್ರಕಾರಗಳ ಶಿಕ್ಷಣಗಳನ್ನು ಅಳವಡಿಸಿಕೊಂಡು ಪುಟ್ಟ ಮಕ್ಕಳನ್ನೇ ಮುಂದೆ ದೊಡ್ಡ ದೊಡ್ಡ ಕಲಾವಿದರನ್ನಾಗಿಸುವ ಕನಸು ಕಾಣುವ ಶಿಕ್ಷಕರ ಹಾಗೂ ಪೋಷಕರ ಪಾತ್ರ ಈ ಸಮಾಜದಲ್ಲಿ ಅತ್ಯಂತ ಮಹತ್ವದ್ದು ಎಂದು ಇಲ್ಲಿನ ಕಲ್ಯಾಣ್ ನಗರದ ಹೆಚ್ ಎನ್ ಅನಂತಕುಮಾರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಯುವ ಸಂಗೀತ ನಿರ್ದೇಶಕ ಹಾಗೂ ಸ್ವರಮೇಧಾ ಸಂಸ್ಥೆ ಸಂಸ್ಥಾಪಕ ಸಂಗೀತ ಗುರು ಡಾ.ಚಿನ್ಮಯ ರಾವ್ ಅವರು ಶಿಕ್ಷಣ ಸಂಸ್ಥೆಯೊಂದು ಯಶಸ್ವಿಯಾಗಿ ಬೆಳೆಯಬೇಕೆಂದರೆ ಅದರ ಮುಖ್ಯಸ್ಥರಿಗೆ ಅತ್ಯಂತ ಅನನ್ಯವಾದ ದೃಷ್ಟಿಕೋನವಿರಬೇಕು ಹಾಗೂ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಹಗಲಿರುಳು ಶ್ರಮಿಸಬೇಕು, ಅಂತಹ ಶ್ರಮ ಕಿಡ್ಸ್ ಕಿಂಗ್ಡಮ್ ಶಾಲೆಯ ಸಂಸ್ಥಾಪಕರಾದ ನಿಶಾ ಯತಿನ್ ಅವರಲ್ಲಿ ಇದೆ. ಕಳೆದ ಎಂಟು ವರ್ಷಗಳಿಂದ ಮಕ್ಕಳಿಗೆ ಕೇವಲ ಹಗಲು ಹೊತ್ತಿನ ಶಾಲೆಯ ಶಿಕ್ಷಣವನ್ನು ಮಾತ್ರ ನೀಡದೆ ಸಂಜೆಯ ಸಮಯದಲ್ಲಿ ಸಂಗೀತ, ನೃತ್ಯದಂತಹ ವಿವಿಧ ಕಲಾಶಿಕ್ಷಣದ ತರಗತಿಗಳನ್ನೂ ಯಶಸ್ವಿಯಾಗಿ ನಡೆಸುತ್ತಾ ಬಂದಿರುವುದೇ ಹೆಗ್ಗಳಿಕೆಯ ಸಂಗತಿಯಾಗಿದೆ, ಈ ಶಾಲೆ ಸಮಾಜಕ್ಕೆ ಮಾದರಿಯಾಗಲಿ ಎಂದು ಶುಭಹಾರೈಸಿದರು.

ನಂತರ ಡಾ.ಚಿನ್ಮಯ ರಾವ್ ಅವರು ತಮ್ಮದೇ ಸಂಗೀತ ಹಾಗೂ ಸಾಹಿತ್ಯದ “ಶಾರದೆ ಕರುಣೆಯ ತೋರೆ, ಅರಿವಿನ ಧಾರೆ” ಎಂಬ ಜನಪ್ರಿಯ ಭಕ್ತಿಗೀತೆಯನ್ನು ದೇಶ್ ರಾಗದಲ್ಲಿ ಹಾಡಿ ಸಂಗೀತಾಭಿಮಾನಿಗಳನ್ನು ಮನರಂಜಿಸಿದರು. ಈ ಸಂದರ್ಭದಲ್ಲಿ ಕಿಡ್ಸ್ ಕಿಂಗ್ಡಮ್ ಶಾಲೆಯ ಸಂಸ್ಥಾಪಕಿ ನಿಶಾ ಯತಿನ್, ಉದ್ಯಮಿ ಮಾರುತಿ ಎಸ್ ಎ ಹಾಗೂ ಶಾಲೆಯ ಎಲ್ಲಾ ಶಿಕ್ಷಕಶಿಕ್ಷಕಿಯರು ಹಾಜರಿದ್ದರು.
ಯುವನಟಿ ಹಾಗೂ ಪ್ರಖ್ಯಾತ ರೂಪದರ್ಶಿ ವಿಜೆ ದೀಪಾ ಎಸ್ ಅವರ ಸೊಗಸಾದ ನಿರೂಪಣೆ ಪ್ರೇಕ್ಷಕರನ್ನು ನಾಲ್ಕು ಗಂಟೆಗಳ ಕಾಲ ಹಿಡಿದು ಕೂರಿಸಿತ್ತು. ಸಭಾ ಕಾರ್ಯಕ್ರಮದ ನಂತರದಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುಟ್ಟ ಪುಟ್ಟ ಮಕ್ಕಳ ಪ್ರತಿಭಾಪ್ರದರ್ಶನ ಕಲಾಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿತು.