ಉಪಯುಕ್ತ ಸುದ್ದಿ

ಅಜಾಗರೂಕತೆಯಿಂದ ಚಾಲನೆ ಮಾಡಿದರೆ ಚಾಲಕರ ವಿರುದ್ಧ ಕಠಿಣ ಕ್ರಮ: ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ

Share It

ಬೆಂಗಳೂರು: ಚಾಲಕರು ಅಜಾಗರೂಕತೆಯಿಂದ ಬಸ್ ಚಾಲನೆ ಮಾಡಿ ಸಾರ್ವಜನಿಕರ ಸಾವು ನೋವಿಗೆ ಕಾರಣವಾದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ ನೀಡಿದರು.

“ಘಾಟಿ ಟೂರ್” ಪ್ಯಾಕೇಜ್ ಪ್ರವಾಸದಡಿಯಲ್ಲಿ ಪರಿಚಯಿಸಲಾಗುತ್ತಿರುವ ನೂತನ ಮಾರ್ಗದ ಲೋಕಾರ್ಪಣೆ ಮತ್ತು ಮೃತರ ಅವಲಂಬಿತರಿಗೆ ರೂ.1.5 ಕೋಟಿ ವಿಮಾ ಪರಿಹಾರ ಮೊತ್ತದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಾಲಕರು ಜವಾಬ್ದಾರಿಯಿಂದ, ಜಾಗರೂಕತೆಯಿಂದ ಚಾಲನೆ ಮಾಡಬೇಕು. ಅತೀ ವೇಗ , ನಿರ್ಲಕ್ಷ್ಯದ ಚಾಲನೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲವೆಂದು ತಿಳಿಸಿದರು.

ಸಂಸ್ಥೆಯಲ್ಲಿ ಶಿಸ್ತು ಕಾಪಾಡಬೇಕು. ಚಾಲಕರು ಬಸ್ ಅಪಘಾತದಲ್ಲಿ  ಯಾವುದೇ ಪ್ರಯಾಣಿಕರ ಸಾವಿಗೆ ಕಾರಣರಾದರೇ ಅವರ‌ ಮೇಲೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಬೇಕೆಂದು ಸಾರಿಗೆ ಸಂಸ್ಥೆ ವ್ಯವಸ್ಥಾಪಕ‌ ನಿರ್ದೇಶಕರಿಗೆ ಆದೇಶಿಸಿದರು. ಕಠಿಣ ಕ್ರಮದ ಭಯವಿಲ್ಲದೆ ಅಜಾಗರೂಕತೆ ಅಲಕ್ಷ್ಯ ವಹಿಸಿ ಪ್ರಯಾಣಿಕರ ಸಾವು ನೋವಿಗೆ ಕಾರಣರಾಗುವ ಸಿಬ್ಬಂದಿಯನ್ನು ಮನ್ನಿಸುವ ಪ್ರಶ್ನೆಯೇ ಇಲ್ಲ ಎಂದರು.

ಮಾರ್ಚ್-2024 ರಿಂದ ಟೂರ್ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದ್ದು, ಈವರೆವಿಗೂ 61,500 ಕ್ಕಿಂತ ಹೆಚ್ಚು ಸಾರ್ವಜನಿಕರು ಸದರಿ ಪ್ಯಾಕೇಜ್ನಲ್ಲಿ ಪ್ರವಾಸ ಮಾಡಿರುತ್ತಾರೆ. ಈಶ ಫೌಂಡೇಶನ್ ಟೂರ್ ಗೆ ಪೂರಕವಾಗಿ “ಘಾಟಿ ಈಶ ಫೌಂಡೇಷನ್” ಪ್ರವಾಸ ಪ್ಯಾಕೇಜ್ ಪ್ರಾರಂಭಿಸಲಾಗಿದೆ ಎಂದರು.

ಪ್ರವಾಸದ ವಿವರ :
ನೆಲದಾಂಜನೇಯ ಸ್ವಾಮಿ ದೇವಸ್ಥಾನ,
ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ,
ಜ್ಞಾನತೀರ್ಥ ಲಿಂಗ (ಮುದ್ದೇನಹಳ್ಳಿ,),
ಶ್ರೀ ದಕ್ಷಿಣ ಕಾಶಿ ಪಂಚನಂದಿ ಕ್ಷೇತ್ರ ಪಾಪಾತ್ಮ ಮಠ (ಸ್ಕಂದಗಿರಿ),
ಕಲ್ಯಾಣಿ (ಕಾರಂಜಿ)
ಈಶ ಫೌಂಡೇಷನ್

ಈ ಸೇವೆ ಶನಿವಾರ, ಭಾನುವಾರ ಮತ್ತು ರಜೆ ದಿನಗಳಲ್ಲಿ ಲಭ್ಯವಿದ್ದು. ಟಿಕೆಟ್ ದರ ರೂ.600/- ನಿಗದಿಪಡಿಸಲಾಗಿದೆ.

ಹೆಚ್ಚುವರಿ ಪ್ಯಾಕೇಜ್ ಸೇವೆಗಳು:
ಈಶ ಫೌಂಡೇಷನ್-1ಎ (ಬನಶಂಕರಿ ಟಿಟಿಎಂಸಿ ) ಹಾಗೂ 1ಬಿ (ಸೆಂಟ್ರಲ್ ಸಿಲ್ಕ್ ಬೋರ್ಡ್) ಎಂಬ ಹೊಸ ಮಾರ್ಗಗಳನ್ನು ಆರಂಭಿಸಲಾಗುತ್ತಿದೆ. ಈ ಪ್ರವಾಸದ ಅವಧಿಯಲ್ಲಿ

ಸಂದರ್ಶಿಸುವ ಸ್ಥಳಗಳು:
ಭೋಗ ನಂದೀಶ್ವರ ದೇವಸ್ಥಾನ
ಕಣಿವೆ ಬಸವಣ್ಣ ದೇವಸ್ಥಾನ
ಸರ್.ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಸಮಾಧಿ ಮುದ್ದೇನಹಳ್ಳಿ,
ರಂಗಸ್ಥಳ ರಂಗನಾಥ ಸ್ವಾಮಿ ದೇವಸ್ಥಾನ
ಈಶ ಫೌಂಡೇಷನ್
ಪ್ರವಾಸ ದರ ಕ್ರಮವಾಗಿ ರೂ.700/- ಮತ್ತು ರೂ.750/-

ನೂತನ ವೇಗದೂತ (Express ಸೇವೆಗಳ) ವಿವರ

ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ ನೂತನ ವೇಗದೂತ ಸೀಮಿತ ನಿಲುಗಡೆ ಸೇವೆಗಳನ್ನು ದಿನಾಂಕ: 21.06.2025 ರಿಂದ ಜಾರಿಗೆ ಬರುವಂತೆ ಪರಿಚಯಿಸಲಾಗುತ್ತಿದೆ. ರೂ.1500/- ಪಾಸು ಮೂಲಕ ಎಲ್ಲ ಸಾಮಾನ್ಯ ಮತ್ತು ವೇಗದೂತ ಸೇವೆಗಳಲ್ಲಿ ಪ್ರಯಾಣ ಸಾಧ್ಯ ಮತ್ತು ಸದರಿ ಪಾಸುದಾರರು ಪ್ರತಿ ಸುತ್ತುವಳಿಗೆ ರೂ.30/-(ಜಿ.ಎಸ್.ಟಿ ಸೇರಿ) ಹಾಗೂ ಅನ್ವಯವಾಗುವ ಟೋಲ್ ದರಗಳನ್ನು ಪಾವತಿಸಿ ವಜ್ರ ಮತ್ತು ವೇಗದೂತ ವಜ್ರ ಸೇವೆಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಒಟ್ಟು 5 ಮಾರ್ಗಗಳಿಂದ 48 ಅನುಸೂಚಿಗಳು ಮತ್ತು 348 ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.

ಇದೆ ಸಂದರ್ಭದಲ್ಲಿ ರೂ 1.50 ಕೋಟಿ ಅಪಘಾತ ವಿಮೆ ಹಾಗೂ ಗುಂಪುವಿಮಾ ಯೋಜನೆ ಮೊತ್ತವನ್ನು 3 ಮೃತಾವಲಂಬಿತರ ಕುಟುಂಬದವರಿಗೆ ನೀಡಲಾಯಿತು. ಈವರೆಗೆ ಸ್ವಾಭಾವಿಕ/ಇತರೆ ಕಾರಣಗಳಿಂದ ಮೃತಪಟ್ಟ 82 ನಾಮನಿರ್ದೇಶಿತರಿಗೆ ತಲಾ ₹10 ಲಕ್ಷದಂತೆ ಒಟ್ಟು ₹8.20 ಕೋಟಿ ಪರಿಹಾರ ನೀಡಲಾಗಿದೆ.


Share It

You cannot copy content of this page