ಹುಲಿಮರಿಗಳ ಸಾವಿಗೆ ಕಾರಣವೇನು? ಅರಣ್ಯ ಇಲಾಖೆಯ ಹೇಳಿದ್ದೇನು?
ಮೈಸೂರು: ಜಿಲ್ಲೆಯ ಹುಣಸೂರು ವಲಯದ ಗೌಡನಕಟ್ಟೆ ಗ್ರಾಮದಲ್ಲಿ ಇತ್ತೀಚೆಗೆ ರಕ್ಷಣೆ ಮಾಡಲಾಗಿದ್ದ ನಾಲ್ಕು ಹುಲಿ ಮರಿಗಳ ಸಾವಿಗೆ ಹೃದಯನಾಳದ ವೈಫಲ್ಯವೇ ಕಾರಣ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಹುಣಸೂರು ವಲಯದ ಹನಗೋಡು ಶಾಖೆಯ ಗೌಡನಕಟ್ಟೆ ಗ್ರಾಮದಲ್ಲಿ ನವೆಂಬರ್ 27ರಿಂದ 30ರ ವರೆಗೆ ನಡೆದ ಕಾರ್ಯಾಚರಣೆಯಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿಗಳನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿತ್ತು. ಬಳಿಕ ಅವುಗಳನ್ನು ಆರೋಗ್ಯ ಮತ್ತು ಸುರಕ್ಷತೆ ಹಿತದೃಷ್ಟಿಯಿಂದ ಮೈಸೂರು ಮೃಗಾಲಯ ಚಾಮುಂಡಿ ವನ್ಯಪ್ರಾಣಿಗಳ ಪುನರ್ವಸತಿ ಕೇಂದ್ರಕ್ಕೆ ಹಸ್ತಾಂತರಿಸಲಾಗಿತ್ತು. ಆದರೆ, ತಾಯಿ ಹುಲಿ ಸುರಕ್ಷಿತವಾಗಿದ್ದು, ನಾಲ್ಕು ಮರಿಗಳು ಸಾವನ್ನಪ್ಪಿದ್ದವು.
ನಾಲ್ಕು ಹುಲಿ ಮರಿಗಳ ಪೈಕಿ ಡಿಸೆಂಬರ್ 1ರಂದು ಒಂದು ಹೆಣ್ಣು ಮರಿಯು ಹೃದಯರಕ್ತನಾಳದ ವೈಫಲ್ಯ ಮತ್ತು ತೀವ್ರವಾದ ಜಠರದ ಉರಿತ ದಿಂದ ಅಸುನೀಗಿದೆ. ಬಳಿಕ ಡಿಸೆಂಬರ್ 5ರಂದು ಒಂದು ಗಂಡು ಹುಲಿ ಮರಿಯು ರಕ್ತಸ್ರಾವದ ಜಠರದುರಿತ ಮತ್ತು ಎನ್ಸೆಫಾಲಿಟಿಸ್ ನಿಂದ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.


