ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಈಗಾಗಲೇ ಎಸ್ಐಟಿ ವಶದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ಎಸ್ಐಟಿ ಕಸ್ಟಡಿಯನ್ನು ಜೂನ್ ೧೦ರವರೆಗೆ ವಿಸ್ತರಣೆ ಮಾಡಿ ನ್ಯಾಯಾಲಯ ಆದೇಶ ನೀಡಿದೆ.
ಜೂ.೬ರವರೆಗೆ ನ್ಯಾಯಾಲಯ ಎಸ್ಐಟಿ ಕಸ್ಟಡಿಗೆ ಪ್ರಜ್ವಲ್ ರೇವಣ್ಣನನ್ನು ನೀಡಿತ್ತು. ಇಂದಿಗೆ ಆ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಎಸ್ಐಟಿ ಪೊಲೀಸರು ಪ್ರಜ್ವಲ್ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಕೀಲರ ವಾದ ವಿವಾದವನ್ನು ಆಲಿಸಿದ ನ್ಯಾಯಾಲಯ ನಾಲ್ಕು ದಿನಗಳ ಕಾಲ ಎಸ್ಐಟಿ ಕಸ್ಟಡಿಯನ್ನು ವಿಸ್ತರಣೆ ಮಾಡಿ ಆದೇಶ ಮಾಡಿದೆ.

ಪ್ರಜ್ವಲ್ ರೇವಣ್ಣ ಪರ ವಕೀಲರು ಈಗಾಗಲೇ ಏಳು ದಿನಗಳ ಕಾಲ ಎಸ್ಐಟಿ ವಶಕ್ಕೆ ಪಡೆದುಕೊಂಡಿದೆ. ಅಷ್ಟರಲ್ಲಿ ವಿಚಾರಣೆಯ ಪ್ರಕ್ರಿಯೆ ಮುಗಿದಿರಬಹುದು. ಹೀಗಾಗಿ, ಮತ್ತೇ ಕಸ್ಟಡಿಗೆ ಕೊಡುವುದು ಬೇಡ ಎಂದು ವಾದ ಮಂಡಿಸಿದ್ದರು. ಆದರೆ, ಎಸ್ಐಟಿ ಪರ ವಕೀಲರು ವಾದ ಮಂಡಿಸಿ, ಮತ್ತೇ ಏಳು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದರು.
ನ್ಯಾಯಾದೀಶರು ಎಸ್ಐಟಿ ಕಸ್ಟಡಿಯಲ್ಲಿ ನಿಮಗೇನಾದರೂ ತೊಂದರೆಯಾಗಿದೆಯಾ ಎಂದು ಪ್ರಜ್ವಲ್ ರೇವಣ್ಣನನ್ನು ಪ್ರಶ್ನಿಸಿದರು, ಪ್ರಜ್ವಲ್ ರೇವಣ್ಣ ಏನು ಸಮಸ್ಯೆಯಾಗಿಲ್ಲ ಎಂದು ಉತ್ತರ ನೀಡಿದರು. ನಂತರ ಆದೇಶ ಮಾಡಿದ ನ್ಯಾಯಾಲಯ ನಾಲ್ಕು ದಿನಗಳ ಕಾಲ ಕಸ್ಟಡಿ ಅವಧಿಯನ್ನು ವಿಸ್ತರಣೆ ಮಾಡಿತು.

