ಬೆಂಗಳೂರು: “ಜ್ಞಾನ ಮತ್ತು ಜ್ಞಾನವಂತರನ್ನು ದ್ವೇಷಿಸುವ ಯಾವ ದೇಶವು ಪ್ರಗತಿ ಹೊಂದುವುದಿಲ್ಲ”, ಲೇಖಕ ವಸುಧೇಂದ್ರ ಅವರ “ತೇಜೋ ತುಂಗಭದ್ರಾ” ಕಾದಂಬರಿಯಲ್ಲಿ ಬರುವ ಸಾಲಿದು. ಇದನ್ನು ಉಲ್ಲೇಖ ಮಾಡಿದ್ದು, ಹೈಕೋರ್ಟ್ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್.
ಪ್ರಕರಣವೊಂದರ ವಿಚಾರಣೆ ವೇಳೆ ‘ ಸಾರ್ವಜನಿಕ ಜೀವನದಲ್ಲಿ ದುಡಿಯುವ ವ್ಯಕ್ತಿಗಳು ತಮ್ಮ ನಾಲಗೆಯ ಮೇಲೆ ನಿಯಂತ್ರಣ ಹೊಂದಿರಬೇಕು” ಎಂದು ರಾಜಕಾರಣಿಗಳಿಗೆ ಕಿವಿಮಾತು ಹೇಳಿದ ನ್ಯಾಯಪೀಠ, ಈ ಮೇಲಿನ ಸಾಲುಗಳನ್ನು ಉಲ್ಲೇಖಿಸಿ, ಪ್ರಗತಿಪರ ಲೇಖಕರು, ಸಾಹಿತಿಗಳು, ಚಿಂತಕರನ್ನು ಅಣಕಿಸುವ ರಾಜಕಾರಣಿಗಳಿಗೆ ಪರೋಕ್ಷ ಎಚ್ಚರಿಕೆ ನೀಡಿತು.
ತಮಿಳುನಾಡಿನ ಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಉದಯನಿಧಿ ಸ್ಟಾಲಿನ್, ಸನಾತಮ ಧರ್ಮ ಒಂದು ಸಾಂಕ್ರಾಮಿಕ ರೋಗವಾಗಿದ್ದು, ಅದನ್ನು ಬುಡಸಮೇತ ಕಿತ್ತುಹಾಕಬೇಕು’ ಎಂಬ ಹೇಳಿಕೆ ನೀಡಿದ್ದರು. ಇದರ ವಿರುದ್ಧ ವಿ. ಪರಮೇಶ್ ಎಂಬುವವರು ಬೆಂಗಳೂರಿನ 42 ನೇ ಎಸಿಎಂಎಂ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣವನ್ನು ಕೈಬಿಡಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದ ತಮಿಳುನಾಡು ಲೇಖಕರು ಮತ್ತು ಕಲಾವಿದರ ಸಂಘದ ಸು.ವೆಂಕಟೇಶನ್ ಸೇರಿದಂತೆ ಮೂವರ ಅರ್ಜಿಗಳ ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾಯಪೀಠ ಇಂತಹ ಮೌಲ್ಯಯುತ ಮಾತುಗಳನ್ನು ಪ್ರಕಟ ಮಾಡಿತು. ಜತಗೆ, ಭಾರತ ಸರ್ವಧರ್ಮದ ನಾಡು, ಇದು ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲ ಜಾತಿ ಮತ್ತು ಧರ್ಮಕ್ಕೆ ಸೇರಿದ್ದು ಎಂಬುದನ್ನು ಮರೆಯಬಾರದು ಎಂದು ದೂರುದಾರರಿಗೆ ತಿಳಿಸಿತು.
ವಿಚಾರಣಾ ನ್ಯಾಯಾಲಯದ ಎಲ್ಲ ಕಲಾಪಗಳಿಗೆ ಮುಂದಿನ ವಿಚಾರಣೆವರೆಗೆ ತಾತ್ಕಾಲಿಕ ತಡೆ ನೀಡುವ ಮೂಲಕ ದೂರುದಾರರಿಗೆ ನೋಟೀಸ್ ಜಾರಿಗೊಳಿಸುವಂತೆ ಆದೇಶ ಮಾಡಿತು. ಉದಯನಿಧಿ ಸ್ಟಾಲಿನ್ ಹೇಳಿಕೆ ಉಲ್ಲೇಖಿಸಿ ನೀಡಿರುವ ದೂರಿಗಾಗಿ, ಲೇಖಕರು ಮತ್ತು ಕಲಾವಿದರು ಬೆಂಗಳೂರಿನ ಕೋರ್ಟ್ ಮೆಟ್ಟಿಲೇರುವಂತೆ ಮಾಡಲಾಗಿದೆ ಎಂಬುದು ಅರ್ಜಿದಾರರ ಆಕ್ಷೇಪವಾಗಿತ್ತು. ಇದಕ್ಕಾಗಿಯೇ ಹೈಕೋರ್ಟ್ ಜ್ಞಾನ ಮತ್ತು ಜ್ಞಾನಿವಂತರ ಪ್ತಸ್ತಾಪವನ್ನು ನ್ಯಾಯಮೂರ್ತಿಗಳು ಮಾಡಿದರು.
