ಕಡೂರು: ಕಡೂರು ತಾಲೂಕು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಪ್ರಮುಖ ಮೂರು ಬೇಡಿಕೆಗಳನ್ನು ರಾಜ್ಯ ಸರ್ಕಾರ ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿ ನೌಕರ ಸಂಘದ ಅಧ್ಯಕ್ಷ ಅರೇಹಳ್ಳಿ ಎಸ್ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ತಹಸೀಲ್ದಾರ್ ಕಚೇರಿಗೆ ತೆರಳಿದ ನೌಕರ ಸಂಘದ ಪದಾಧಿಕಾರಿಗಳು ಶುಕ್ರವಾರ ಉಪ ತಹಸೀಲ್ದಾರ್ ನಾಗರತ್ನ ಅವರಿಗೆ ಮನವಿ ಸಲ್ಲಿಸಿದರು.
ನೌಕರ ಅಧ್ಯಕ್ಷ ಅರೇಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ 7 ನೇ ವೇತನ ಆಯೋಗವು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದು ಅದನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಆದೇಶ ಹೊರಡಿಸಬೇಕು.
ಫಿಟ್ಮೆಂಟ್ ಸೌಲಭ್ಯವನ್ನು ಕನಿಷ್ಠ ಶೇ ೨೭.೫೦ಕ್ಕೆ ಹೆಚ್ಚಿಸಿ ಜುಲೈ ೧ಕ್ಕೆ ಅನ್ವಯವಾಗುವಂತೆ ವೇತನ ನಿಗಧಿಪಡಿಸಬೇಕು ಎಂದು ಆಗ್ರಹಿಸಿದರು.
ಎನ್ಪಿಎಸ್ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ನೌಕರರ ಜೀವನ ನಿರ್ವಹಣೆ ಹಾಗೂ ನಿವೃತ್ತಿಯ ನಂತರ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್ಪಿಎಸ್ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ತರುವುದು ಸರ್ಕಾರದ ಜವಬ್ದಾರಿಯಾಗಿದೆ. ಈಗಾಗಲೇ ರಾಜಸ್ಥಾನ,ಪಂಜಾಬ್ ಸೇರಿದಂತೆ ಅನೇಕ ರಾಜ್ಯದಲ್ಲಿ ಹಳೆ ಪಿಂಚಣಿ ಜಾರಿಗೆ ತಂದಿರುವಂತೆ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಎನ್ಪಿಎಸ್ ಯೋಜನೆ ಜಾರಿಗೊಳಿಸಲಿ ಎಂದರು.
ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಿ ನೌಕರರ ಕುಟುಂಬ ಅವಲಂಭಿತರಿಗೆ ನಗದುರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಘೋಷಿಸಬೇಕೆಂದು ಒತ್ತಾಯ ಮಾಡಿದರು.
ರಾಜ್ಯ ಸರ್ಕಾರದ ಮುಂದಿರುವ ೩ ನ್ಯಾಯಯುತ ಬೇಡಿಕೆಗಳನ್ನು ಜಾರಿಗೊಳಿಸುವಲ್ಲಿ ವಿಳಂಬವಾಗುತ್ತಿದ್ದು ಶೀಘ್ರವೇ ಸರ್ಕಾರ ಆದೇಶ ನೀಡಬೇಕು ಎಂದು ನೌಕರ ಸಂಘದ ಸದಸ್ಯರು ಒತ್ತಾಯಿಸಿ ಮನವಿ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಅನಿಲ್ಕುಮಾರ್, ಉಪಾಧ್ಯಕ್ಷ ಬಿ.ಪಿ.ರಾಜಪ್ಪ, ರಾಜ್ಯ ಪರಿಷತ್ ಸದಸ್ಯ ಸುರೇಶ್, ಹೆಚ್.ಎಂ.ಚೈತ್ರಾ, ಯಮುನಾ ಮೋಹನ್, ಪುಷ್ಪಲತಾ ಸಿ.ಕೆ.ಮೂರ್ತಿ, ಅಶೋಕ್,ಎ.ಪಿ,.ಎಸ್ ಅಧ್ಯಕ್ಷ ಪ್ರಶಾಂತ್, ಇಸಿಓ ಮಂಜಪ್ಪ, ಜಗದೀಶ್, ಲಿಂಗರಾಜು, ಹನುಮಂತಪ್ಪ, ಖಜಾನೆ ಅಧಿಕಾರಿ ಶಶಿಕಲಾ,ಟಿ.ಬಿ. ಮೂರ್ತಿ ಗೀತಾ, ಭಾಗ್ಯಮ್ಮ ಹಾಗೂ ವೀರಮಾರುತಿ ಸೇರಿ ಇದ್ದರು.
