ಬೆಂಗಳೂರು: 5 ರುಪಾಯಿ ಚಿಲ್ಲರೆ ಕೊಡಲಿಲ್ಲ ಎಂದು ಹಿಂದಿ ಭಾಷಿಕನೊಬ್ಬ ಮಾಡಿದ್ದ ‘ಚಿಲ್ಲರೆ ಟ್ವೀಟ್’ ಗೆ ನಿರ್ವಾಹಕನನ್ನು ಅಮಾನತು ಮಾಡಿದ್ದ ಬಿಎಂಟಿಸಿ ವಿರುದ್ಧ ಕನ್ನಡ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.
ಯುವ ಕರ್ನಾಟಕ ವೇದಿಕೆ ಮುಖ್ಯಸ್ಥ ರೂಪೇಶ್ ರಾಜಣ್ಣ ನೇತ್ರತ್ವದಲ್ಲಿ ಬಿಎಂಟಿಸಿ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದ ಕಾರ್ಯಕರ್ತರು, ನಿರ್ವಾಹಕನ ವಿರುದ್ಧದ ಆದೇಶ ಹಿಂಪಡೆಯುವಂತೆ ಒತ್ತಾಯಿಸಿದರು.
ಪರಭಾಷಿಕನೊಬ್ಬ ಕಂಡಕ್ಟರ್ ವಿರುದ್ಧ ಮಾಡಿದ ಸಣ್ಣ ವಿಡಿಯೋ ತುಣುಕು ಇಟ್ಟುಕೊಂಡು ಅವನ ಜೀವನವನ್ನೇ ಕಿತ್ತುಕೊಳ್ಳುವ ಪ್ರಯತ್ನ ಮಾಡುವುದು ಎಷ್ಟು ಸರಿ? ಅಷ್ಟಾ ಅಲ್ಲಿ ನಡೆದಿದ್ದೇನು ಎಂಬ ಬಗ್ಗೆ ಪೂರ್ಣ ಮಾಹಿತಿ ಪಡೆಯದೆ ಅಮಾನತು ಮಾಡಿದ್ದೇಕೆ ಎಂದು ಹೋರಾಟಗಾರರು ಪ್ರಶ್ನಿಸಿದರು.
ಈ ವೇಳೆ ಬಿಎಂಟಿಸಿ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲನೆ ನಡೆಸಿ, ಇನ್ನೆರಡು ದಿನದಲ್ಲಿ ಆತನ ಅಮಾನತು ಆದೇಶ ವಾಪಸ್ ಪಡೆಯಲಾಗುವುದು ಎಂದು ಸಮಜಾಯಿಷಿ ನೀಡಿದರು.
ಈ ನಡುವೆ ಪರಭಾಷಿಕರು ನಗರದಲ್ಲಿ ನಡೆಸುತ್ತಿರುವ ದಬ್ಬಾಳಿಕೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಹಿಂದಿ ಭಾಷಿಕರು, ಬಿಎಂಟಿಸಿ ನಿರ್ವಾಹಕರು, ಆಟೋ ಚಾಲಕರು, ಸ್ವಿಗ್ಗಿ ಹುಡುಗರ ಜತೆ ನಡೆದುಕೊಳ್ಳುತ್ತಿರುವ ರೀತಿಯನ್ನು ವಿಮರ್ಶಿಸಿ ಟ್ವೀಟ್ ಮಾಡಿದ್ದಾರೆ. ನಿರ್ವಾಹಕನ ಅಮಾನತು ವಾಪಸ್ ಪಡೆಯುವಂತೆ ಜಾಲತಾಣದಲ್ಲಿ ಕೂಡ ಒತ್ತಾಯಿಸಿದ್ದಾರೆ.

