ಬೆಂಗಳೂರು: ವೃತ್ತಿಪರ ಕೋರ್ಸ್ ಗಳಲ್ಲಿ ಕ್ರೀಡಾ ಕೋಟಾದಡಿ ಪ್ರವೇಶ ಪಡೆಯಬೇಕೆಂಬ ಕ್ರೀಡಾಪಟುಗಳ ಆಸೆಯನ್ನು ಹೈಕೋರ್ಟ್ ಜೀವಂತವಾಗಿಸಿರಿದ್ದು, ಮರುಪರಿಶೀಲನೆಗೆ ಆದೇಶಿಸಿದೆ.
ಪ್ರಸಕ್ತ ಸಾಲಿನಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್ಗಳ ಪ್ರವೇಶ ಸಂಬಂಧ ಕ್ರೀಡಾ ಕೋಟಾದ ಅರ್ಹತೆಗಳನ್ನು ಮರುಪರಿಶೀಲನೆ ನಡೆಸಿಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಕೆಇಎ ನಿಗದಿಪಡಿಸಿರುವ ಕ್ರೀಡಾ ಕೋಟಾದ ಅರ್ಹತಾ ಮಾನದಂಡಗಳನ್ನು ಪ್ರಶ್ನಿಸಿ ಮೈಸೂರಿನ ಟೆನಿಸ್ ಆಟಗಾರ್ತಿ ದೀಕ್ಷಾ ಪ್ರಸಾದ್ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಜೊತೆಗೆ, 18 ವರ್ಷದ ಅರ್ಜಿದಾರರನ್ನು ಕ್ರೀಡಾ ಕೋಟಾದ ಅರ್ಹರ ಪಟ್ಟಿಗೆ ಸೇರಿಸುವಂತೆಯೂ, ಆಕೆಗೆ ಕೌನ್ಸೆಲಿಂಗ್ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆಯೂ ನ್ಯಾಯಾಲಯ ಇದೇ ವೇಳೆ ನಿರ್ದೇಶನ ನೀಡಿದೆ. ಕೋವಿಡ್ ಕಾರಣ ಕಳೆದ ಕೆಲವು ವರ್ಷಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟ ನಡೆದಿಲ್ಲ. ಹಾಗಾಗಿ ಮಾನದಂಡಗಳ ಮರುಪರಿಶೀಲನೆ ಅಗತ್ಯವಿದೆ ಎಂದು ಪೀಠ ತಿಳಿಸಿದೆ.
ಅಭ್ಯರ್ಥಿ ಕ್ರೀಡಾ ಕೋಟಾದಲ್ಲಿ ಸೀಟು ಪಡೆಯಬೇಕಾದರೆ ಮೂರು ವರ್ಷ ಸತತವಾಗಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ರಾಜ್ಯ ಅಥವಾ ದೇಶವನ್ನು ಪ್ರತಿನಿಧಿಸಿ ಪದಕವನ್ನು ಜಯಿಸಿರಬೇಕು. ಆದರೆ, ಕರೋನಾ ಕಾರಣದಿಂದ 2021 ಹಾಗೂ 2022ರಲ್ಲಿ ರಾಷ್ಟ್ರೀಯ ಕ್ರೀಡಾಕೂಟ ನಡೆದಿರಲಿಲ್ಲ. 2022-23 ಹಾಗೂ 2023-24ನೇ ಸಾಲಿನ ಕ್ರೀಡಾಕೂಟಗಳು ಒಂದೇ ವರ್ಷ ನಡೆದಿವೆ. ಹಾಗಾಗಿ ಒಂದನ್ನು ಮಾತ್ರ ಕೆಇಎ ಪರಿಗಣಿಸುತ್ತಿದ್ದು, ಅರ್ಜಿದಾರರು ಕ್ರೀಡಾ ಕೋಟಾಕ್ಕೆ ಅನರ್ಹರಾಗುತ್ತಾರೆ. ಆದ್ದರಿಂದ ಕೆಇಎಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅರ್ಜಿದಾರರ ಪರ ವಕೀಲರು ಕೋರಿದರು.
ಕೆಇಎ ಪರ ವಾದ ಮಂಡಿಸಿದ ವಕೀಲರು, ಕರೋನಾ ಸೃಷ್ಟಿಸಿದ ವಿಚಿತ್ರ ಸನ್ನಿವೇಶದಿಂದ ಕ್ರೀಡಾ ಕೋಟಾದಡಿ ಸಾಕಷ್ಟು ಅರ್ಹರು ಪ್ರವೇಶ ಪಡೆಯಲಾಗಿಲ್ಲ. ಹೀಗಾಗಿ ಅರ್ಜಿದಾರರು ಸೇರಿ ಇತರರಿಗೆ ಅನ್ವಯವಾಗುವಂತೆ ಕ್ರೀಡಾ ಕೋಟಾ ಪಟ್ಟಿ ಪರಿಷ್ಕರಣೆಗೆ ನ್ಯಾಯಾಲಯ ಆದೇಶ ನೀಡಬೇಕು ಎಂದು ಮನವಿ ಮಾಡಿದರು.
ವಾದ ಆಲಿಸಿದ ಬಳಿಕ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೆಇಎ ಕ್ರೀಡಾ ಕೋಟದ ಅರ್ಹತಾ ಮಾನದಂಡಗಳನ್ನು ಮರುಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿ ವಿಚಾರಣೆ ಮುಂದೂಡಿತು.