ಬೆಂಗಳೂರು : ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅಂದುಕೊಂಡಂತೆ ಕಾಂಗ್ರೆಸ್ ಗೆಲುವು ಸಾಧಿಸಿಲ್ಲ. ಹೀಗಾಗಿ ಎಐಸಿಸಿ ಕಮಿಟಿ ಮಾಡಿದೆ.
ಈ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿ, ‘ಎಐಸಿಸಿ ಮಟ್ಟದಲ್ಲಿ 15 ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ನಾವು 9 ಸ್ಥಾನಕ್ಕೆ ಬಂದೆವು. ಸರ್ಕಾರ ಇದ್ದು ಕೂಡ ಇಷ್ಟೊಂದು ಕಡಿಮೆ ಆಯ್ತು ಎಂದು ಆತ್ಮಾವಲೋಕನ ಅಥವಾ ಫಾಕ್ಟ್ ಫೈಂಡಿಂಗ್ ಕಮಿಟಿ ರಚನೆ ಮಾಡಿದ್ದಾರೆ. ಇದು ಇಲ್ಲಿ ಅಷ್ಟೇ ಅಲ್ಲ, ಬೇರೆ ರಾಜ್ಯಕ್ಕೂ ಮಾಡಿದ್ದಾರೆ ಎಂದರು.
ಈ ವರದಿ ಮೇಲೆ ಸಚಿವ ಸಂಪುಟ ಬದಲಾವಣೆ ಪ್ರಶ್ನೆಗೆ ಉತ್ತರಿಸಿದ ಅವರು ‘ಅದು ಹೈಕಮಾಂಡ್ಗೆ ಬಿಟ್ಟ ವಿಚಾರವಾಗಿದೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ? ನಮಗೆ ಗೊತ್ತಾಗಲ್ಲ. ಫಾಕ್ಟ್ ಫೈಂಡಿಂಗ್ ಆಧಾರದ ಮೇಲೆ ಕೆಲವೊಮ್ಮೆ ನಿರ್ಧಾರಗಳು ಆಗುತ್ತದೆ. ಎಐಸಿಸಿ ಇರೋದೇ ನಮ್ಮನ್ನ ರೆಗ್ಯುಲೇಟ್ ಮಾಡುವುದಕ್ಕೆ ಎಂದು ಸ್ಪಷ್ಟನೆ ನೀಡಿದರು.
ಇದೇ ವೇಳೆ ವಾಲ್ಮೀಕಿ ಪ್ರಕರಣ ತನಿಖೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ‘ಆ ತನಿಖೆ ನಡೀತಾ ಇದೆ. ಬ್ಯಾಂಕಿಂಗ್ ತನಿಖೆಯನ್ನು ಸಿಬಿಐ ಮಾಡುತ್ತಿದ್ದರೆ, ನಿಗಮದ ವಿಚಾರವನ್ನು ಎಸ್ಐಟಿ ಮಾಡ್ತಾ ಇದೆ. ಅದರೆ ತನಿಖೆ ಬಗ್ಗೆ ಅಧಿಕೃತವಾಗಿ ಸಿಬಿಐ ನಮ್ಮನ್ನ ಏನೂ ಕೇಳಿಲ್ಲ ಎಂದರು.
