ತಾಲ್ಲೂಕಿನ ಖುದಾವಂದಪೂರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಅಂಬೇಡ್ಕರ್ ಜಯಂತಿ ವೇಳೆ ಗಲಾಟೆ ನಡೆದಿದೆ. ದಲಿತರೊಬ್ಬರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಮರಾಠ, ಲಿಂಗಾಯತ ಸಮುದಾಯದ 10 ಜನರ ವಿರುದ್ಧ ಮೆಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಖುದಾವಂದಪೂರ ಗ್ರಾಮದಲ್ಲಿ ಏಪ್ರಿಲ್ 29ರಂದು ರಾತ್ರಿ 9 ಗಂಟೆಗೆ ಅಂಬೇಡ್ಕರ್ ಜಯಂತಿ ಮೆರವಣಿಗೆಯಲ್ಲಿ ಲೇಜಿಮ್ ಹಾಡಿಗೆ ನೃತ್ಯ ಮಾಡುವಾಗ ಅದೇ ಗ್ರಾಮದ ಮರಾಠ ಸಮುದಾಯದ ವಿಕಾಸ ಅಶೋಕ ಮೈನಾಳೆ ಕಲ್ಲು ತೂರಾಟ ನಡೆಸಿದ್ದರಿಂದ ಗೊಂದಲ ನಿರ್ಮಾಣವಾಗಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಸಮಾಧಾನಪಡಿಸಲು ಯತ್ನಿಸಿದ್ದರು.
ಆದರೂ ಮರಾಠಾ, ಲಿಂಗಾಯತ ಸಮುದಾಯದ ಯುವಕರು ಕಟ್ಟಿಗೆಗಳನ್ನು ತಂದು ಹೊಡೆಯಲು ಬಂದಿದ್ದರು. ಅಂಬೇಡ್ಕರ್ ಜಯಂತಿ ವೇಳೆ ನಡೆದ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಏಪ್ರಿಲ್ 30ರಂದು ಆಕಾಶ್ ಅಶೋಕ್ ಮೈನಾಳೆ ನನಗೆ ಅವಾಚ ಶಬ್ದಗಳಿಂದ ನಿಂದಿಸಿ ಬೆಲ್ಟ್ನಿಂದ ಹೊಡೆದಿದ್ದಾನೆ.
ಗ್ರಾಮದ ರಾಗುಬವ್ ಸಮಾಧಿ ಹತ್ತಿರ ಮುಖ್ಯ ಆರೋಪಿ ದತ್ತಾ ಶಂಕರ ಸಂಗಮೆ ಎದುರುಗಡೆ ನನ್ನ ಗಂಡ ದತ್ತಾತ್ರಿ ಸತವಾಜಿ ಭಾಲ್ಕೆಯನ್ನು ನಿಲ್ಲಿಸಿ 9 ಯುವಕರು ಹೊಡೆದಿರುತ್ತಾರೆ. ಬಹಿರ್ದೆಸೆಗೆ ಊರಿನೊಳಗೆ ಬರದಂತೆ ಬೆದರಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿಯೂ ದತ್ತ ಶಂಕರ್ ಸಂಗಮಿ ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಅನಿತಾ ದತ್ತಾತ್ರಿ ಭಾಲ್ಕೆ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ ತಡೆ ಕಾಯ್ದೆ ಅಡಿ ದತ್ತಾ ಶಂಕರ ಸಂಗಮೆ, ಕಿಶನ ಶಂಕರ, ಭೀಮ ಶಿವಾಜಿ, ರಾಮಕಿಶನ ಸುಭಾಷರಾವ್, ಅಶೋಕ ಚಂದ್ರಪ್ಪ, ಗಣೇಶ್ ಅಶೋಕ, ವಿಷ್ಣು ದುರ್ಯೋಧನ, ವಿಕಾಸ್ ಅಶೋಕ, ಸುಶಾಂತ ಸುನಿಲ್, ಅಭಿಷೇಕ ಅಂಬಾದಾಸ್ ಅವರ ಮೇಲೆ ಪ್ರಕರಣ ದಾಖಲಾಗಿದೆ. ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆಗೆ ಸಂಬಂಧಿಸಿದಂತೆ Under (BNS) 115(2), 118(1), 351(2),352 2 190 2.. 2 3(1)(r), 3(1)(s), 3(2)(v-a) ಮೆಹಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.