ಬೆಂಗಳೂರು: ಬಿಜೆಪಿಯವರು ಹೇಳಿದ್ದನ್ನು ಕೇಳಿಸಿಕೊಳ್ಳಲು ಸದನಕ್ಕೆ ಬರುವುದಲ್ಲ. ಇಷ್ಟು ದಿನ ರಕ್ಷಣಾತ್ಮಕವಾಗಿ ಇದ್ದಿದ್ದು ಸಾಕು. ಇನ್ನು ಮುಂದೆ ಆಕ್ರಮಣಕಾರಿಯಾಗಿ ಉತ್ತರ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರಿಗೆ ಕರೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಾಲ್ಮೀಕಿ ನಿಗಮ ಮತ್ತು ಮುಡಾದಲ್ಲಿ ಸರ್ಕಾರದಿಂದಾಲಿ, ನನ್ನಿಂದಾಗಲಿ, ಯಾವುದೇ ಅಕ್ರಮ ಆಗಿಲ್ಲ. ಆದ್ದರಿಂದ ಪಕ್ಷದ ಶಾಸಕರು ಧೈರ್ಯವಾಗಿ ಸದನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸದಸ್ಯರನ್ನು ಎದುರಿಸಿ ಎಂದು ಕರೆ ನೀಡಿದರು.
ವಾಲ್ಮೀಕಿ ಮತ್ತು ಮುಡಾ ಪ್ರಕರಣದಲ್ಲಿ ಸರ್ಕಾರದಿಂದ ಯಾವುದೇ ತಪ್ಪು ಆಗಿಲ್ಲ. ಆದರೂ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಪಕ್ಷದ ಸದಸ್ಯರು ಸರ್ಕಾರಕ್ಕೆ ಹಾನಿ ಮಾಡಿ ವರ್ಚಸ್ಸು ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ಸದಸ್ಯರು ಹೋರಾಟ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ ಮತ್ತು ಸಂತೋಷ್ ಲಾಡ್ ನನ್ನ ತೇಜೋವಧೆಗೆ ಷಡ್ಯಂತ್ರ ರೂಪಿಸಿದ್ದಾರೆ. ಇದನ್ನು ರಾಜಕೀಯವಾಗಿಯೇ ಎದುರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ಸರ್ಕಾರದಿಂದ ಯಾವುದೇ ತಪ್ಪು ಆಗದೇ ಇದ್ದರೂ ಪಕ್ಷದ ವರ್ಚಸ್ಸು ಹಾಳು ಮಾಡಲು ಪ್ರಯತ್ನ ನಡೆಯುತ್ತಿದೆ. ಶಾಸಕರು ಯಾವುದೇ ಅನುಮಾನ ಇಲ್ಲದೇ ಸದನದಲ್ಲಿ ಬಿಜೆಪಿ ಲೋಪಗಳನ್ನು ಎತ್ತಿ ಹಿಡಿದು ತೋರಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರಿಗೆ ಶಾಸಕಾಂಗ ಸಭೆಯಲ್ಲಿ ಕರೆ ನೀಡಿದರು.