ರಾಮನಗರ: ಪೆಟ್ರೋಲ್ ಮತ್ತು ಹಾಲಿನ ಬೆಲೆ ಹೆಚ್ಚಳದಿಂದ ಈಗಾಗಲೇ ತತ್ತರಿಸಿರುವ ಜನರ ಮೇಲೆ ರಾಜ್ಯಸರ್ಕಾರ ಆಟೋ ಪ್ರಯಾಣ ದರ ಏರಿಕೆ ಹೊರೆಯನ್ನೂ ಹಾಕಲಿದೆಯೇ? ಎಂಬ ಪ್ರಶ್ನೆಗೆ ಸಾರಿಗೆ ಸಚಿವರು ಉತ್ತರ ನೀಡಿದ್ದಾರೆ.
ರಾಮನಗರದಲ್ಲಿಂದು ಈ ಬಗ್ಗೆ ಮಾತಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಪೆಟ್ರೋಲ್ ಬೆಲೆ ಹೆಚ್ಚಾಗಿರುವುದರಿಂದ ಆಟೋ ಚಾಲಕರು ಮಿನಿಮಮ್ ದರವನ್ನು ಹೆಚ್ಚಿಸುವಂತೆ ಮನವಿ ಸಲ್ಲಿಸಿರುವುದು ಸತ್ಯ, ಅದನ್ನು ಸಾರಿಗೆ ಆಯುಕ್ತರಿಗೆ ಕಳಿಸಲಾಗಿದೆ, ಅವರು ಕಮಿಟಿಯೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಿದರು.
“ಆಯಾ ಸಮಯಕ್ಕೆ ಬೆಲೆಗಳು ಹೆಚ್ಚುತ್ತಿರುತ್ತವೆ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ ಉದ್ಯೋಗಿಗಳ ಸಂಬಳ ಹೆಚ್ಚಾಗುವಂತೆ ಬೇರೆ ದರಗಳೂ ಹೆಚ್ಚಾಗುತ್ತವೆ” ಎಂದು ಸಾರಿಗೆ ಸಚಿವರು ಹೇಳಿದರು.
2014ರಲ್ಲಿ ಕೇಂದ್ರದಲ್ಲಿ ನಮ್ಮ ಸರ್ಕಾರವಿದ್ದಾಗ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 71 ರೂ. ಇತ್ತು. ಬಿಜೆಪಿ ಸರ್ಕಾರ 110 ರೂ. ಗಳಿಗೆ ಹೆಚ್ಚಿಸಿತು. ಅವರು 30 ರೂ. ಹೆಚ್ಚಿಸಿದರೆ ನಾವು ಕೇವಲ 3 ರೂ. ಹೆಚ್ಚಿಸಿದ್ದೇವೆ ಎಂದು ಸಚಿವ ರಾಮಲಿಂಗಾರೆಡ್ಡಿ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸಮರ್ಥಿಸಿಕೊಂಡರು.
ಒಟ್ಟಿನಲ್ಲಿ ಸರ್ಕಾರಗಳು ಪರಸ್ಪರ ದೋಷಾರೋಪಣೆ ಮಾಡುತ್ತಾ ತಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿವೆ ಅಂತ ಜನರಿಗೆ ಅರ್ಥವಾಗುತ್ತಿದೆ, ಆದರೆ ಅವರಿಗೆ ಅರ್ಥವಾಗುತ್ತಿದೆ ಅಂತ ಸರ್ಕಾರಗಳನ್ನು ನಡೆಸುವವರಿಗೆ ಅರ್ಥವಾಗುತ್ತಿಲ್ಲ ಎಂದು ವಿಶ್ಲೇಷಣೆ ಮಾಡಬಹುದು.

