ಬಾಗಲಕೋಟೆ: ಮದುವೆಗೆ ಹೋಗುವಾಗ ಅಥವಾ ಮದುವೆ ಮುಗಿಸಿಕೊಂಡು ಹೋಗುವಾಗ ಅಪಘಾತವಾಗಿ ವರ, ವಧು ಅಥವಾ ಸಂಬಂಧಿಕರು ಸಾವನ್ನಪ್ಪುವ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಇದು ಸ್ವಲ್ಪ ಭಿನ್ನವಾದ ಘಟನೆ. ವೈವಾಹಿಕ ಜೀವನದ ಬಗ್ಗೆ ಅಪಾರವಾದ ಕನಸು ಕಂಡು ತಾಳಿ ಕಟ್ಟಿದ ಹದಿನೈದು ನಿಮಿಷದಲ್ಲೇ ವರ ಸಾವನ್ನಪ್ಪಿರುವ ಕರುಣಾಜನಕ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ನಡೆದಿದೆ.
ಅದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ. ಎಲ್ಲಾ ಮದುವೆಗಳಲ್ಲಿ ಆಗುವಂತೆ ಅಲ್ಲಿ ವರ, ವಧುವಿಗೆ ತಾಳಿ ಕಟ್ಟುವ ಶಾಸ್ತ್ರ ನಡೆದಿದೆ. ಇದಾದ ಮೇಲೆ ಕುಟುಂಬ ವರ್ಗದವರು ವಧು-ವರರನ್ನು ಆಶೀರ್ವದಿಸುತ್ತಿದ್ದರು. ಆದರೆ ಕೇವಲ 15 ನಿಮಿಷಗಳ ಅಂತರದಲ್ಲಿ ವರ ಸಾವನ್ನಪ್ಪಿದ್ದಾರೆ.
ತಾಳಿ ಕಟ್ಟಿದ 15 ನಿಮಿಷಗಳ ಅಂತರದಲ್ಲಿ ವರ ಸಾವನ್ನಪ್ಪಲು ಹೃದಯಾಘಾತವೇ ಕಾರಣ ಎಂದು ತಿಳಿದುಬಂದಿದೆ. ಹೃದಯಾಘಾತದಿಂದ ಕುಸಿದು ಬಿದ್ದ ಸಾವನ್ನಪ್ಪಿರುವ ದುರ್ದೈವಿಯ ಹೆಸರು ಪ್ರವೀಣ್ ಕುರಣಿ (25) ಎಂದು ಗೊತ್ತಾಗಿದೆ. ಇವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕುಂಬಾರ ಹಳ್ಳ ಗ್ರಾಮದ ನಿವಾಸಿಯಾಗಿದ್ದರು.
ಹೊಸ ಜೀವನ ಆರಂಭಿಸುವ ಹೊತ್ತಿನಲ್ಲೇ ಪ್ರವೀಣ್ ಕುರಣಿ ಅವರು ಬದುಕಿಗೆ ವಿದಾಯ ಹೇಳಿದ್ದಾರೆ. ಇವರ ಈ ಹಠಾತ್ ಸಾವು ಕುಟುಂಬಸ್ಥರನ್ನು ಆತಂಕಕ್ಕೆ ಈಡುಮಾಡಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇವು ಪ್ರಾಥಮಿಕ ಹಂತದ ಮಾಹಿತಿಗಳಾಗಿದ್ದು ಇನ್ನಷ್ಟು ಮಾಹಿತಿಗಳು ತಿಳಿದು ಬರಬೇಕಿದೆ.