ಮುಂಬೈ: ಟಿ-20 ಕ್ರಿಕೆಟ್ ವಿಶ್ವಕಪ್ ಗೆಲುವಿನ ಬಳಿಕ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ಮಾದರಿಗೆ ನಿವೃತ್ತಿ ಘೋಷಿಸಿದರೆ, ಯುವಕರನ್ನೊಳಗೊಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಇದೀಗ ಶ್ರೀಲಂಕಾ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ.
ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನೇಮಕಗೊಂಡ ಬಳಿಕ ನಡೆದ ಆಯ್ಕೆ ಪ್ರಕ್ರಿಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ಗೆ ನಾಯಕ ಸ್ಥಾನ ನೀಡಲಾಗಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ನಾಯಕನಾಗುತ್ತಾರೆ ಅನ್ನೋ ಮಾತಗಳಿಗೆ ತೆರೆಬಿದ್ದಿದೆ. ಇತ್ತ ಏಕದಿನ ಸರಣಿಗೆ ನಾಯಕ ರೊಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮರಳಿದ್ದಾರೆ.
ರೋಹಿತ್ ಶರ್ಮಾ ಟಿ-20 ಮಾದರಿಗೆ ವಿದಾಯ ಹೇಳಿದ ಬಳಿಕ ನಾಯಕ ಜವಾಬ್ದಾರಿ ಯಾರು ನಿರ್ವಹಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಪೈಕಿ ಹಾರ್ದಿಕ್ ಪಾಂಡ್ಯ ಹೆಸರು ಮುಂಚೂಣಿಯಲ್ಲಿತ್ತು. ಆದರೆ ನೂತನ ಕೋಚ್ ಗೌತಮ್ ಗಂಭೀರ್ ಈ ವಿಚಾರಗಳಲ್ಲಿ ಭಿನ್ನವಾಗಿ ಯೋಚಿಸುತ್ತಾರೆ.
ಹೀಗಾಗಿ ಪಾಂಡ್ಯ ನಾಯಕನಾಗುವುದು ಅನುಮಾನ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಹಾರ್ದಿಕ್ ಪಾಂಡ್ಯ ಬದಲು ಸೂರ್ಯಕುಮಾರ್ ಯಾದವ್ಗೆ ನಾಯಕ ಸ್ಥಾನ ನೀಡಲಾಗಿದೆ. ಇನ್ನು ಶುಭಮನ್ ಗಿಲ್ಗೆ ಉಪನಾಯಕನ ಸ್ಥಾನ ನೀಡಲಾಗಿದೆ. ಶ್ರೀಲಂಕಾ ಸರಣಿಗೆ ಇಶಾನ್ ಕಿಶನ್ ಆಯ್ಕೆಯಾಗಿಲ್ಲ.
ಶ್ರೀಲಂಕಾ ವಿರುದ್ದದ ಟಿ-20 ಸರಣಿಗೆ ಭಾರತ ತಂಡ:
ಸೂರ್ಯಕುಮಾರ್ ಯಾದವ್(ನಾಯಕ), ಶುಭಮಾನ್ ಗಿಲ್(ಉಪನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಬ್ ಪಂತ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಸರ್ ಪಟೇಲ್, ವಾಶಿಂಗ್ಟನ್ ಸುಂದರ್, ರವಿ ಬಿಶ್ನೋಯ್, ಅರ್ಶದೀಪ್ ಸಿಂಗ್, ಖಲೀಲ್ ಅಹಮ್ಮದ್, ಮೊಹಮ್ಮದ್ ಸಿರಾಜ್
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ಇಷ್ಟೇ ಅಲ್ಲ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಏಕದಿನ ಸರಣಿಗೆ ಟೀಂ ಇಂಡಿಯಾ ತಂಡ ಇಂತಿದೆ
ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್(ಉಪನಾಯಕ), ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಶದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಸರ್ ಪಟೇಲ್, ಖಲೀಲ್ ಅಹಮ್ಮದ್, ಹರ್ಷಿತ್ ರಾಣ
ಜುಲೈ 27 ರಿಂದ 3 ಟಿ-20 ಹಾಗೂ 3 ಏಕದಿನ ಪಂದ್ಯದ ಸರಣಿ ಆರಂಭಗೊಳ್ಳುತ್ತಿದೆ. ಒಟ್ಟು 6 ಪಂದ್ಯಕ್ಕಾಗಿ ಟೀಂ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಜುಲೈ 27 ರಿಂದ ಆಗಸ್ಟ್ 7ರವರೆಗೆ ಟಿ-20 ಹಾಗೂ ಏಕದಿನ ಸರಣಿ ನಡೆಯಲಿದೆ. ಟಿ-20 ಪಂದ್ಯಗಳು ಸಂಜೆ 7.30ಕ್ಕೆ ಆರಂಭಗೊಂಡರೆ, ಏಕದಿನ ಪಂದ್ಯಗಳು ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳಲಿದೆ. ಟಿ-20 ಪಂದ್ಯ ಪಲ್ಲಕೆಲೆಯಲ್ಲಿ ಆಯೋಜಿಸಲಾಗಿದೆ. ಏಕದಿನ ಪಂದ್ಯ ಕೊಲೊಂಬೊದಲ್ಲಿ ನಡೆಯಲಿದೆ.