ಬೆಂಗಳೂರು: ಎಸ್ ಐಟಿ ಮುಂದೆ ಶರಣಾಗದೆ ಆಟ ಆಡಿಸುತ್ತಿರುವ ಭವಾನಿ ರೇವಣ್ಣ ಭವಿಷ್ಯ ಇಂದು ಅಂತಿಮವಾಗಲಿದೆ. ಹೈಕೋರ್ಟ್ ಇಂದು ನಿರೀಕ್ಷಣಾ ಜಾಮೀನು ನೀಡದಿದ್ದರೆ, ಎಸ್ಐಟಿ ಮುಂದೆ ಶರಣಾಗುವ ಅನಿವಾರ್ಯತೆ ಭವಾನಿಯವರದ್ದಾಗಲಿದೆ.
ಈಗಾಗಲೇ ಸೆಷನ್ ನ್ಯಾಯಾಲಯ ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಇಂದು ಭವಾನಿ ಪರ ವಕೀಲರು, ಹೈಕೋರ್ಟ್ ನಲ್ಲಿ ನಿರೀಕ್ಷಣಾ ಜಾಮಿನು ಅರ್ಜಿ ಹಾಕಿದ್ದಾರೆ. ಒಂದು ವೇಳೆ ಹೈಕೋರ್ಟ್ ಕೂಡ ನೀರೀಕ್ಷಣಾ ಜಾಮೀನು ನೀಡದಿದ್ದರೆ ಎಸ್ಐಟಿ ಮುಂದೆ ಶರಣಾಗಲು ಭವಾನಿ ರೇವಣ್ಣ ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಎಸ್ಐಟಿ ಈಗಾಗಲೇ ಎರಡು ನೊಟೀಸ್ ನೀಡಿ ಭವಾನಿ ಅವರನ್ನು ವಿಚಾರಣೆ ಗೆ ಕರೆದಿದೆ. ಆದರೆ, ವಿಚಾರಣೆ ನೆಪದಲ್ಲಿ ಎಸ್ಐಟಿ ಪೊಲೀಸರು ಬಂಧನ ಮಾಡಬಹುದು ಎಂಬುದು ಭವಾನಿ ಅವರನ್ನು ಕಾಡುತ್ತಿದೆ. ಹೀಗಾಗಿಯೇ ಅವರು ಎಸ್ಐಟಿ ಮುಂದೆ ಹಾಜರಾಗಲು ಹಿಂದೇಟು ಹಾಕುತ್ತಿದ್ದು, ಪೊಲೀಸರ ಕೈಗೆ ಸಿಗದಂತೆ ತಲೆಮರೆಸಿಕೊಂಡಿದ್ದಾರೆ. ಇದೀಗ ಹೈಕೋರ್ಟ್ ಅವರಿಗೆ ಅಂತಿಮ ಆಶಾಕಿರಣವಾಗಿದ್ದು, ಅದನ್ನು ನೋಡಿಕೊಂಡು ಶರಣಾಗಲು ತೀರ್ಮಾನಿಸಿದ್ದಾರೆ.
ಕೆ.ಆರ್. ನಗರದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಭವಾನಿ ಅವರಿಗೆ ನೊಟೀಸ್ ನೀಡಲಾಗಿದೆ. ಆದರೆ ಈವರೆಗೆ ವಿಚಾರಣೆಗೆ ಅವರು ಹಾಜರಾಗಿಲ್ಲ. ಸೆಷನ್ ನ್ಯಾಯಾಲಯ ಜಾಮೀನು ನಿರಾಕರಿಸಿದ್ದು, ಹೈಕೋರ್ಟಿನ ತೀರ್ಮಾನದಲ್ಲಿ ಭವಾನಿ ಭವಿಷ್ಯ ಅಡಗಿದೆ.
ಆರೋಗ್ಯವನ್ನೇ ಮುಂದಿಟ್ಟುಬಜಾಮೀನಿಗೆ ಮನವಿ: ಭವಾನಿ ಅವರ ಆರೋಗ್ಯವನ್ನು ಮುಂದಿಟ್ಟುಕೊಂಡೇ ನಿರೀಕ್ಷಣಾ ಜಾಮೀನು ಪಡೆಯಲು ಭವಾನಿ ಪರ ವಕೀಲರು ತೀರ್ಮಾನಿಸಿದ್ದಾರೆ. ಭವಾನಿ ಅವರು ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಈಗಾಗಲೇ ಸೆಷನ್ಸ್ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಅದೇ ಅಂಶವನ್ನು ಮುಂದಿಟ್ಟು, ವಿಚಾರಣೆಗೆ ಹಾಜರಾಗುತ್ತೇವೆ. ಆದರೆ, ಅನಾರೋಗ್ಯದ ಕಾರಣಕ್ಕೆ ನಿರೀಕ್ಷಣಾ ಜಾಮೀನು ಕೊಡಿ ಎಂದು ಕೇಳಿಕೊಳ್ಳಲು ತೀರ್ಮಾನಿಸಿದ್ದಾರೆ.

