ಬೆಂಗಳೂರು: ಬಿಡದಿ ಬಳಿ ಮರಕ್ಕೆ ನೇಣುಬಿಗಿದುಕೊಂಡಿರುವ ಸಿಸಿಬಿ ಇನ್ಸ್ ಪೆಕ್ಟರ್ ತಿಮ್ಮೇಗೌಡ ಸಾವಿಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅವರ ಮೇಲಿದ್ದ ಅತ್ಯಾಚಾರದ ಪ್ರಕರಣವೇ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ.
ಸೋಮವಾರ ಬೆಳಗ್ಗೆ ತಿಮ್ಮೇಗೌಡ ಅವರು, ಬಿಡದಿ ಸಮೀಪದ ಕುಂಬಳಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ.
2004 ರಲ್ಲಿ ತಿಮ್ಮೇಗೌಡ ಹಾಸನದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಮಹಿಳೆಯೊಬ್ಬರು ಅತ್ಯಾಚಾರ ಪ್ರರಕಣ ದಾಖಲು ಮಾಡಿದ್ದರು. ಡಿಎನ್ಎ ಪರೀಕ್ಷೆಯಲ್ಲಿ ಆಕೆಗೆ ಹುಟ್ಟಿದ ಮಗು ತಿಮ್ಮೇಗೌಡರದ್ದೇ ಎಂದು ತಿಳಿದುಬಂದಿತ್ತು.
ಇದೇ ತಿಂಗಳು 30 ಕ್ಕೆ ನ್ಯಾಯಾಲಯದಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆ ಎದುರಿಸಬೇಕಿತ್ತು ಎಂದು ತಿಳಿದುಬಂದಿದೆ. ತಿಮ್ಮೇಗೌಡ ಕುಟುಂಬಸ್ಥರು ಕೊಲೆಯ ಶಂಕೆ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

