ಬಿಜೆಪಿ- ಜೆಡಿಎಸ್ ಪಾದಯಾತ್ರೆ ದೆಹಲಿಗೆ ಹೊರಡಲಿ : ಸಲೀಂ ಅಹಮದ್
ಬೆಂಗಳೂರು: ಮೂಡ ಹಗರಣದ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರು ದೆಹಲಿಗೆ ಪಾದಯಾತ್ರೆ ಮಾಡುವ ಮೂಲಕ ರಾಜ್ಯಕ್ಕಾದ ಅನ್ಯಾಯವನ್ನು ಪ್ರತಿಭಟಿಸಲಿ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮೈಸೂರು ಪಾದಯಾತ್ರೆ ಯಾವ ಪುರುಷಾರ್ಥಕ್ಕೆ ಆಯೋಜನೆಯಾಗಿದೆ ಎಂಬುದು ಗೊತ್ತಿಲ್ಲ. ವಿಧಾನಮಂಡಲದಲ್ಲಿ ಚರ್ಚೆ ಮಾಡದೆ ಪಲಾಯನ ಮಾಡಿದ ಅವರು, ಈಗ ಪಾದಯಾತ್ರೆಯ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜ್ಯಕ್ಕೆ ಬಜೆಟ್ ನಲ್ಲಿ ಅನ್ಯಾಯವಾಗಿದೆ. ನಿರ್ಮಲಾ ಸೀತರಾಮನ್ ಅವರು ರಾಜ್ಯದವರಾಗಿದ್ದರೂ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ಇದನ್ನೆಲ್ಲ ಕೇಳಲು ಬಿಜೆಪಿ ಮತ್ತು ಮೈತ್ರಿ ನಾಯಕರಿಗೆ ತಾಕತ್ತಿಲ್ಲ. ಆದರೆ, ಸಿದ್ದರಾಮಯ್ಯ ಅವರ ವಿರುದ್ಧ ಸುಳ್ಳು ಆರೋಪ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದರು.
ವಾಲ್ಮೀಕಿ ಹಗರಣದಲ್ಲಿ ಸರಕಾರ ಎಸ್ ಐಟಿ ತನಿಖೆ ನಡೆಸುತ್ತಿದೆ. ಮೂಡ ಹಗರಣದ ವಿಚಾರದಲ್ಲಿ ತನಿಖೆ ನಡೆಸಲು ನ್ಯಾಯಾಂಗ ಆಯೋಗ ರಚನೆ ಮಾಡಿದೆ. ಇಷ್ಟಿದ್ದರೂ ಭ್ರಷ್ಟಾಚಾರದ ಆರೋಪ ಮಾಡುವ ಬಿಜೆಪಿಗೆ ನಾಚಿಕೆ ಆಗಬೇಕು ಎಂದು ಟೀಕಿಸಿದರು.
ಬಿಜೆಪಿ ಭ್ರಷ್ಟಾಚಾರ ಬಯಲು ಮಾಡ್ತೇವೆ: ಬಿಜೆಪಿ ಅಧಿಕಾರದಲ್ಲಿದ್ದಾಗ ಹಗರಣಗಳ ಸರಮಾಲೆಯನ್ನೇ ಮಾಡಿದೆ. 21 ಪ್ರಕರಣಗಳ ತನಿಖೆ ಆಗಬೇಕಿದ್ದು, ಅವರ ಕಾಲದ ಹಗರಣಗಳನ್ನು ಜನರ ಮುಂದಿಟ್ಟು ಅವರನ್ನು ಬೆತ್ತಲೆ ಮಾಡ್ತೇವೆ. ಜನರೇ ಬಿಜೆಪಿ ಮತ್ತು ಜೆಡಿಎಸ್ ಗೆ ತಕ್ಕ ಪಾಠ ಕಲಿಸುವಂತೆ ಮಾಡ್ತೇವೆ ಎಂದು ಎಚ್ಚರಿಕೆ ನೀಡಿದರು.


