ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ನಡೆದಿರುವ ಭೀಕರ ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೈವೆಯಲ್ಲಿ ಚಲಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿಗೆ ಕೆರೆಗೆ ಬಿದ್ದಿದೆ.
ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಸ್ಕೋಡಾ ಕಾರೊಂದು ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗೇಟ್ ಬಳಿ ಮುಂದೆ ಹೋಗುತ್ತಿದ್ದ ಮತ್ತೊಂದು ಕಾರನ್ನು ಓವರ್ಟೇಕ್ ಮಾಡುವ ಭರದಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದು, ಚಾಲಕನ ನಿಯಂತ್ರಣ ತಪ್ಪಿ ಸರ್ವಿಸ್ ರೋಡ್ ಪಕ್ಕದಲ್ಲಿದ್ದ ಕೆರೆಗೆ ಹಾರಿದೆ. ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ಅತಿಯಾದ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಮುಖ್ಯ ಕಾರಣ ಎಂಬುದು ವಿಡಿಯೋದಲ್ಲಿ ಗೊತ್ತಾಗುತ್ತದೆ. ಸಧ್ಯಕ್ಕೆ ಕಾರಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.
ಹೈವೆಯಲ್ಲಿ ಇದೇ ತರಹದ ಅಪಘಾತಗಳು ನಡೆಯುತ್ತಲೇ ಇದ್ದು, ಅಜಾಗರೂಕತೆಯಿಂದ ಚಾಲನೆ ಮಾಡುವವರಿಗೆ ಎಷ್ಟೇ ಎಚ್ಚರಿಕೆ ನೀಡಿದರೂ ಗಮನಿಸುವುದಿಲ್ಲ. ಅಲೋಕ್ ಕುಮಾರ್ ಅವರು ಸಂಚಾರಿ ವಿಭಾಗದ ಎಡಿಜಿಪಿಯಾದ ನಂತರ ಹೈವೆಯಲ್ಲಿ ಅಜಾಗರೂಕ ಚಾಲನೆಗೆ ದಂಡ ವಿಧಿಸುವ ಪ್ರಕ್ರಿಯೆ ಜೋರಾಗಿದೆ.
80 ಕಿ.ಮೀಗಿಂತ ವೇಗವಾಗಿ ಚಲಿಸಿದರೆ, ಮೊಬೈಲ್ ಬಳಕೆ ಮಾಡಿದರೆ ಮತ್ತು ಲೈನ್ ಕ್ರಾಸ್ ಮಾಡಿದಂತೆ ದಂಡ ವಿಧಿಸಲಾಗುತ್ತಿದೆ. ಎಕ್ಸ್ಪ್ರೆಸ್ ಹೈವೇಯಲ್ಲಿ ಅಳವಡಿಸಿರುವ ಎಐ ಕ್ಯಾಮರಾ ಮೂಲಕ ವೇಗದ ಮಿತಿ ಮೀರುವ ವಾಹನಗಳನ್ನು ಸೆರೆ ಹಿಡಿದು ದಂಡ ಹಾಕಲಾಗುತ್ತಿದ್ದು, ಕೇವಲ 2 ದಿನಕ್ಕೆ 43 ಲಕ್ಷ ರೂ ಸಂಗ್ರಹವಾಗಿದೆ. ಆದರೂ ಬಹಳಷ್ಟು ವಾಹನ ಚಾಲಕರು ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದು, ಅಪಘಾತಗಳು ಸಂಭವಿಸುತ್ತಿವೆ.

