ಬೆಂಗಳೂರು: ಪೊಕ್ಸೋ ಪ್ರಕರಣದಲ್ಲಿ ತನಿಖೆಗೆ ಸರಿಯಾಗಿ ಸ್ಪಂದಿಸದ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ.
ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಪ್ರಾಪ್ತ ಯುವತಿಯ ತಾಯಿ ದೂರು ನೀಡಿದ್ದು, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಸರಕಾರ ಆದೇಶ ಮಾಡಿತ್ತು. ಇದನ್ನು ಪೋಕ್ಸೋ ಪ್ರಕರಣವಾಗಿ ದಾಖಲಿಸಿಕೊಂಡಿದ್ದ, ಪೊಲೀಸರು ತನಿಖೆಗಾಗಿ ಯಡಿಯೂರಪ್ಪ ಅವರಿಗೆ ಅನೇಕ ನೊಟೀಸ್ ನೀಡಿದ್ದರು.
ಆದರೆ, ಈವರೆಗೆ ಯಡಿಯೂರಪ್ಪ ತನಿಖೆಗೆ ಸರಿಯಾಗಿ ಸ್ಪಂದಿಸಿರಲಿಲ್ಲ ಎನ್ನಲಾಗಿದೆ. ಈ ನಡುವೆ ದೂರುದಾರೆ ಸಾವೀಗೀಡಾಗಿದ್ದು, ಪ್ರಕರಣವನ್ನು ತನಿಖೆ ಮುಂದುವರಿಸುವಂತೆ, ಹೈಕೋರ್ಟ್ ನಲ್ಲಿ ಯುವತಿಯ ಸಂಬಂಧಿ ಮನವಿ ಮಾಡಿದ್ದರು. ಇದೀಗ ಪ್ರಕರಣದಲ್ಲಿ ಯಡಿಯೂರಪ್ಪ ಅವರು ವಿಚಾರಣೆಗೆ ಹಾಜರಾಗದೆ, ಕಾಲಾವಕಾಶ ಕೇಳಿ ಪತ್ರ ಬರೆದಿದ್ದರು.
ಪದೇಪದೆ ಯಡಿಯೂರಪ್ಪ ಹೀಗೆ ವಿಚಾರಣೆ ತಪ್ಪಿಸಿಕೊಳ್ಳುತ್ತಿರುವ ಕ್ರಮಕ್ಕೆ ಬೇಸತ್ತ ಸಿಐಡಿ ಪೊಲೀಸರು, ಅವರ ಬಂಧನಕ್ಕೆ ಅವಕಾಶ ಮಾಡಿಕೊಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದರಂತೆ ಒಂಧನೇ ತ್ವರಿತ ನ್ಯಾಯಾಲಯ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ಬಂಧನದ ವಾರಂಟ್ ಜಾರಿ ಮಾಡಿದೆ.
ಹೀಗಾಗಿ, ಅವರ ಬಂಧನಕ್ಕೆ ಪೊಲೀಸರು ಸಜ್ಜಾಗಿದ್ದಾರೆ. ಆದರೆ, ದೆಹಲಿಯಲ್ಲಿ ಇರುವ ಯಡಿಯೂರಪ್ಪ ಬೆಂಗಳೂರಿಗೆ ಯಾವಾಗ ಆಗಮಿಸುತ್ತಾರೆ ಎಂಬುದು ಸಧ್ಯಕ್ಕೆ ಕುತೂಹಲ ಮೂಡಿಸಿದೆ. ಅವರು ಶರಣಾಗ್ತಾರಾ ಎಂಬ ಪ್ರಶ್ನೆಯೂ ಮೂಡಿದೆ.

