ಬೆಂಗಳೂರು: ನಸೀರ್ ಅಹಮದ್ ಅವರದ್ದು ಪಾಕಿಸ್ತಾನದ ನಾಲಿಗೆ ಎಂದು ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಸಭಾಪತಿ ಬಸವರಾಜ ಹೊರಟ್ಟಿ ಒಂದು ದಿನ ಸದನದಿಂದ ಅಮಾನತು ಮಾಡಿದ್ದರು.
ಕಾಂಗ್ರೆಸ್ ಸದಸ್ಯ ನಜೀರ್ ಅಹಮದ್, ಪ್ರಧಾನಿ ಮೋದಿ ಅವರನ್ನು “ದೇಶದ್ರೋಹಿ” ಎಂದು ಹೇಳಿರುವುದಕ್ಕೆ ಪ್ರತಿಯಾಗಿ ಕಿಡಿಕಾರಿದ್ದ ಸಿ.ಟಿ.ರವಿ ಪಾಕಿಸ್ತಾನ ನಾಲಿಗೆ ಮಾತ್ರ ಈ ತರಹ ಮಾತನಾಡುತ್ತದೆ ಎಂದು ಆಕ್ರೋಶ ಹೊರಹಾಕಿದ್ದರು.
ಕಾಂಗ್ರೆಸ್ ಸದಸ್ಯರು ಇದಕ್ಕೆ ಆಕ್ಷೇಪಿಸಿ ಸಿ.ಟಿ.ರವಿ ವಿಷಾದ ವ್ಯಕ್ತಪಡಿಸುವಂತೆ ಒತ್ತಾಯಿಸಿತು. ಇದೇ ವಿಚಾರವಾಗಿ ಕರ್ನಾಟಕ ವಿಧಾನ ಪರಿಷತ್ ಕಾರ್ಯಕಲಾಪ ಹಾಗೂ ನಡವಳಿಕೆ ನಿಯಮದ 327ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ದೂರು ನೀಡಿತ್ತು.
ದೂರು ಪರಿಶೀಲಿಸಿದ ಸಭಾಪತಿ ಹೊರಟ್ಟಿ, ಸದನದಲ್ಲಿ ಗೈರಾಗಿದ್ದ ಸಿ.ಟಿ.ರವಿ ಅವರನ್ನು ರಾತ್ರಿ 8 ಗಂಟೆಯೊಳಗೆ ಕಲಾಪಕ್ಕೆ ಬರುವಂತೆ ವಿಪಕ್ಷದ ಮುಖ್ಯ ಸಚೇತಕ ರವಿಕುಮಾರ್ ಅವರಿಗೆ ನಿರ್ದೇಶಿಸಿದರು. ಗಡುವು ಮುಗಿದರೂ ಹಾಜರಾಗದಿದ್ದರಿಂದ ಸಿ.ಟಿ.ರವಿ ಅವರನ್ನು ಅಮಾನತು ಮಾಡಿರುವುದಾಗಿ ಸಭಾಪತಿಗಳು ನಿರ್ಧಾರ ಪ್ರಕಟಿಸಿದರು.

