ತುಮಕೂರು: ಸ್ವತಃ ಗೃಹ ಸಚಿವರ ಜಿಲ್ಲೆಯಲ್ಲಿಯೇ ದಲಿತ ಯುವಕನ ದೇಗುವ ಪ್ರವೇಶಕ್ಕೆ ಅಡ್ಡಿಯುಂಟಾಗಿದ್ದು, ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಕವಣದಾಲ ಗ್ರಾಮದಲ್ಲಿ ದಲಿತ ಯುವಕನೊಬ್ಬ ರಾಮಾಂಜನೇಯ ದೇಗುಲ ಪ್ರವೇಶ ಮಾಡಿದ್ದ. ಈ ವೇಳೆ ಗ್ರಾಮದ ಒಕ್ಕಲಿಗ ಸಮುದಾಯದವರು ಆತನನ್ನು ತಡೆದು, ಹಿಂದಿನಿಂದ ನಿಮ್ಮವರು ದೇವಸ್ಥಾನ ಪ್ರವೇಶ ಮಾಡುವುದಿಲ್ಲ. ಈಗ ನೀನು ಮಾಡಿದ್ದೀಯಾ ಇದು ತಪ್ಪು ಎಂದಿದ್ದರು.
ದೇವಸ್ಥಾನದಿಂದ ಹೊರಗೆ ಕಳುಹಿಸಿದಾಗ ಆತ ಅಲ್ಲಿದ್ದ ಜನರೊಂದಿಗೆ ವಾಗ್ವಾದ ನಡೆಸಿರುವ ಘಟನೆ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕ ಸಂವಿಧಾನ ಎಲ್ಲರಿಗೂ ಅವಕಾಶ ಕೊಟ್ಟಿದ್ದು, ಪ್ರವೇಶ ನಿರಾಕರಣೆ ಏಕೆ ಎಂದು ಪ್ರಶ್ನಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಯುವಕ ನಂತರ ಡವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದು, ಅಧಿಕಾರಿಗಳು ಸಮಧಾನ ಸಭೆ ನಡೆಸಿದ್ದಾರೆ.
ಗ್ರಾಮಸ್ಥರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ದೇವಸ್ಥಾನ ಪ್ರವೇಶಕ್ಕೆ ಯಾರಿಗೂ ನಿರಾಕರಣೆ ಮಾಡುವಂತಿಲ್ಲ ಎಂದು ತಾಕೀತು ಮಾಡಿದ್ದು, ಯುವಕ ದೂರು ವಾಪಸ್ ಪಡೆದಿದ್ದಾನೆ ಎನ್ನಲಾಗಿದೆ. ಗ್ರಾಮದಲ್ಲಿ ಅನ್ಯೋನ್ಯತೆ ವಾತಾವರಣ ಇರಬೇಕು ಎಂಬ ಕಾರಣಕ್ಕೆ ರಾಜೀ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

