ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ನಟ ದರ್ಶನ್ ತೂಗುದೀಪ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದಲ್ಲದೆ ದರ್ಶನ್ ಜೊತೆ ಎ1 ಆರೋಪಿಯಾಗಿ ಪವಿತ್ರಾ ಗೌಡ ಹಾಗೂ ಇನ್ನಿತರ ಆರೋಪಿಗಳನ್ನು ಸಹ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ರೇಣುಕಾ ಸ್ವಾಮಿ ಕೊಲೆ ಆರೋಪ ಹೊತ್ತಿರುವ ಈ ಎಲ್ಲ ವ್ಯಕ್ತಿಗಳ ಬಗ್ಗೆ ವಿಚಾರಣೆ ತೀವ್ರಗೊಂಡಿದೆ.
ಆರೋಪಿಗಳ ಮೊಬೈಲ್ ಬಗ್ಗೆಯೂ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತಿದೆ. ದರ್ಶನ್, ಪವಿತ್ರಾ ಗೌಡ ಸೇರಿ ಪ್ರಮುಖ 7 ಆರೋಪಿಗಳು ಬೇರೆ ವ್ಯಕ್ತಿಗಳ ಹಸರಿನಲ್ಲಿ ಮೊಬೈಲ್ ನಂಬರ್ ತೆಗೆದುಕೊಂಡಿದ್ದರು. ದರ್ಶನ್ ಬಳಸುವ 8050587999 ಸಂಖ್ಯೆಯು ಬೆಂಗಳೂರಿನ ಪ್ರಕಾಶ್ ನಗರದ ಸಿ.ಪಿ. ಹೇಮಂತ್ ಎಂಬುವವರ ಹೆಸರಿನಲ್ಲಿ ತೆಗೆದುಕೊಂಡಿರುವುದು ಗೊತ್ತಾಗಿದೆ. ಅಲ್ಲದೆ ಪವಿತ್ರಾ ಗೌಡ ಬಳಸುವ 6366697999 ಸಂಖ್ಯೆಯು ಬಸವೇಶ್ವರ ನಗರದ ಮನೋಜ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಪಡೆಯಲಾಗಿದೆ.
ಈ ಮಾಹಿತಿಯನ್ನು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ನೀಡಿದ್ದಾರೆ. ತಾವು ಮಾಡುವ ಕೃತ್ಯ ಬೆಳಕಿಗೆ ಬರಬಾರದು ಎಂಬ ಕಾರಣಕ್ಕೆ ಈ ರೀತಿ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಇರುವ ಮೊಬೈಲ್ ಸಿಮ್ಗಳ ಬಳಕೆ ಮಾಡುತ್ತಿದ್ರಾ? ಎಂಬ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಹೊರಬರುತ್ತಿದೆ.

