ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಂಜೆ ಬಂಧಿತ 10 ಆರೋಪಿಗಳನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ಮುಂದೆ ಪೊಲೀಸರು ಹಾಜರುಪಡಿಸಿದರು.
ನಂತರ ಎ1 ಆರೋಪಿ ನಟಿ-ಕಮ್ ಮಾಡೆಲ್ ಪವಿತ್ರಾ ಗೌಡ, ನಟ ದರ್ಶನ್ ತೂಗುದೀಪ್ ಸೇರಿ 10 ಬಂಧಿತ ಆರೋಪಿಗಳನ್ನು ತಮ್ಮ ಕಸ್ಟಡಿಗೆ ಇನ್ನೂ 10 ದಿನಗಳ ಕಾಲ ನೀಡುವಂತೆ ಪೊಲೀಸರು ನ್ಯಾಯಾಧೀಶರಿಗೆ ಮನವಿ ಮಾಡಿದರು. ಬಳಿಕ ಇದಕ್ಕೆ ಪ್ರತಿ ವಾದಿಸಿದ ಪವಿತ್ರಾ ಗೌಡ ಪರ ವಕೀಲರು ಪವಿತ್ರಾ ಗೌಡ ಅವರ ಮೊಬೈಲ್ ಫೋನ್ ಅನ್ನು ನ್ಯಾಯಾಲಯದ ಆದೇಶ ಇಲ್ಲದಿದ್ದರೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಆಕ್ಷೇಪಣೆ ಮಾಡಿದರು.
ಇದೇ ರೀತಿ ಪೊಲೀಸರು ಮತ್ತು ಆರೋಪಿಗಳ ಪರ ವಕೀಲರು ವಾದ-ಪ್ರತಿವಾದ ಮಂಡಿಸಿದರು. ನಂತರ ಅಂತಿಮವಾಗಿ ನ್ಯಾಯಾಧೀಶರು ಬಂಧಿತ ಎಲ್ಲಾ 10 ಆರೋಪಿಗಳನ್ನು ಜೂನ್ 20 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದರು.
ಇದರಿಂದಾಗಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಬಂಧಿತ 10 ಆರೋಪಿಗಳು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 5 ದಿನ ಪೊಲೀಸರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ವಿಚಾರಣೆ ಎದುರಿಸಬೇಕಿದೆ.

